ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿ, ನೆರೆ ರಾಜ್ಯ ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ಆರೋಪಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಮಂಡ್ಯದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು.
ಮಂಡ್ಯನಗರದ ಸುಭಾಷ್ ನಗರ 1ನೇ ಕ್ರಾಸ್ ನ ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರನ್ನ ವಿನೋಬಾ ರಸ್ತೆಗೆ ಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ವಿವೇಕ್, ಮಂಜುನಾಥ್ ಮತ್ತಿತರನ್ನ ವಶಕ್ಕೆ ಪಡೆದು ಪೊಲೀಸರು ಕರೆದೊಯ್ದರು.
ಕಾವೇರಿ ನದಿಗೆ 4000 ಕ್ಯೂ ಸೆಕ್ ನೀರು ಬಿಡಲಾಗಿದ್ದು, ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಬಿಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ, ಅಷ್ಟೊಂದು ಪ್ರಮಾಣದಲ್ಲಿ ನೀರು ನದಿಗೆ ಹರಿಸುವ ಮೂಲಕ ವಾಮಮಾರ್ಗದಲ್ಲಿ ತಮಿಳುನಾಡಿಗೆ ಹರಿಸುತ್ತಿದೆ ಎಂದು ದೂರಿದರು.
ಶ್ರೀರಂಗಪಟ್ಟಣದಲ್ಲಿ ರೈತ ಮುಖಂಡ ಕೆ ಎಸ್ ನಂಜುಂಡೇಗೌಡರ ನೇತೃತ್ವದಲ್ಲಿ ಭೂತಾಯಿ ರೈತರ ಹೋರಾಟ ಸಮಿತಿಯ ವತಿಯಿಂದ ಕಾವೇರಿ ನದಿ ಇಳಿದು ಪ್ರತಿಭಟಿಸಲಾಯಿತು.