ಕುಮಾರಸ್ವಾಮಿ ಅವರಿಗೆ ಅವರ ಕುಟುಂಬವನ್ನು ಬಿಟ್ಟರೆ ಬೇರೆ ಯಾರು ಕಾಣುವುದಿಲ್ಲ.ಹೀಗಿರುವಾಗ ದಲಿತರನ್ನು ಸಿಎಂ ಮಾಡುತ್ತೇನೆ ಎನ್ನುವುದು ಬರೀ ನಾಟಕ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ವ್ಯಂಗ್ಯವಾಡಿದರು. ನಮ್ಮ ಪಕ್ಷದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು ಆದರೆ ಜೆಡಿಎಸ್ ಪಕ್ಷಕ್ಕೆ ಕಾಣುವುದು ಕುಮಾರಸ್ವಾಮಿ ಮತ್ತು ಅವರ ಫ್ಯಾಮಿಲಿ ಅಷ್ಟೇ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ದಕ್ಷಿಣ ಪದವೀಧರ ಕ್ಷೇತ್ರ ಅಭ್ಯರ್ಥಿ ಮೈ.ವಿ. ರವಿಶಂಕರ್ ರವರ ನೂತನ ಕಛೇರಿಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅಧಿಕಾರಕ್ಕಾಗಿ ಕುಮಾರಸ್ವಾಮಿ ಎಂತಹ ನಾಟಕವನ್ನಾದರೂ ಮಾಡುತ್ತಾರೆ ಎಂದು ಟೀಕಿಸಿದರು. ಕುಮಾರಸ್ವಾಮಿಗೆ ನಾಟಕ ಆಡುವುದು ಹೊಸದಲ್ಲ. ನಾಟಕ ಮಾಡಿಕೊಂಡು ಜನರನ್ನು ಮರಳು ಮಾಡುವ ಕಲೆಯನ್ನು ಚೆನ್ನಾಗಿ ಕಲಿತಿದ್ದಾರೆ. ಕಣ್ಣೀರು ಹಾಕೋದು, ನಾಟಕ ಮಾಡೋದು ಅವರ ಬದುಕಿನ ಒಂದು ಭಾಗವಾಗಿದೆ. ಜನರಿಗೆ ಮೋಸ ಮಾಡಿಕೊಂಡೇ ಬಂದಿದ್ದಾರೆ. ಜನತಾ ಜಲಧಾರೆ ಕಾರ್ಯಕ್ರಮವೂ ಸಹ ನಾಟಕದ ಒಂದು ಭಾಗವೇ ಆಗಿದೆ.
ಕುಮಾರಸ್ವಾಮಿ ತಾವು ಹಾಳಾದುದಲ್ಲದೆ ಅವರನ್ನು ನಂಬಿದವರನ್ನು ಹಾಳು ಮಾಡುತ್ತಿದ್ದಾರೆ. ಸುಳ್ಳು ಹೇಳಿಯೇ ದಕ್ಷಿಣ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ಕುಮಾರಸ್ವಾಮಿಗೆ ರಾಜಕೀಯ ಮಾಡುವುದು ಬಿಟ್ಟರೆ ಏನು ಗೊತ್ತಿಲ್ಲ. ಅವರಿಗೆ ರಾಜಕೀಯ ಮಾಡುವುದೇ ಜೀವನವಾಗಿದೆ. ದಲಿತರನ್ನು ಯಾವುದೇ ಕಾರಣಕ್ಕೂ ಸಿಎಂ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ : ಭ್ರಷ್ಟಾಚಾರಕ್ಕೆ ಮೂಲ ಕಾರಣಕರ್ತರೇ ಕಾಂಗ್ರೆಸಿಗರು : ಅಶ್ವಥ್ ನಾರಾಯಣ್