ಭಾರತದ ರಾಜಕೀಯದಲ್ಲಿ ವಾಣಿಜ್ಯ ನಗರಿ ಮಹಾರಾಷ್ಟ್ರ ಕೂಡ ಪ್ರಮುಖವಾದದ್ದು. ಸುಮಾರು 48 ಲೋಕಸಭಾ ಕ್ಷೇತ್ರಗಳು ಮಹಾರಾಷ್ಟದಲ್ಲಿದೆ. ಪ್ರಸ್ತುತ ಚುನಾವಣೆಯಲ್ಲಿ ಮತದಾರರ ಒಲವು ಶಿವಸೇನೆಯ ಉದ್ಧವ್ ಠಾಕ್ರೆ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಕಡೆಗಿದ್ದು, ಪ್ರಸ್ತುತ ಚುನಾವಣೆಯಲ್ಲಿ ಠಾಕ್ರೆ – ಪವಾರ್ ಜೋಡಿ ಮೋದಿಜೀಗೆ ಬ್ಯಾಂಡ್ ಭಾರಿಸಲಿದೆ ಎಂಬ ಮಾತು ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಚುನಾವಣೆಯ ನಂತರ ಬಲವಾಗಿ ಕೇಳಿ ಬರುತ್ತಿದೆ.
ಮಹಾರಾಷ್ಟ್ರದಲ್ಲಿ ಮೋದಿ ಅಲೆಗೆ ಬದಲಾಗಿ ಠಾಕ್ರೆ ಪರವಾದ ಅಲೆ ಬಲವಾಗಿ ಬೀಸುತ್ತಿದೆ. ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬಗ್ಗೆ ಮಹಾರಾಷ್ಟದ ಜನರಿಗೆ ಬಿಜೆಪಿ, ಸಿಎಂ ಏಕನಾಥ ಶಿಂಧೆ ಹಾಗೂ ಎನ್ ಸಿ ಪಿಯ ಅಜಿತ್ ಪವಾರ್ ಮೇಲೆ ಸಾಕಷ್ಟು ಸಿಟ್ಟಿದೆ.
ಬಾಳಾಠಾಕ್ರೆ ಕಟ್ಟಿದ ಶಿವಸೇನೆಯನ್ನು ಹಾಗೂ ಶರದ್ ಪವಾರ್ ಕಟ್ಟಿದ ನ್ಯಾಷನಲ್ ಕಾಂಗ್ರೆಸ್ ಪಕ್ಷವನ್ನು ಇಬ್ಭಾಗ ಮಾಡಿ ಬಿಜೆಪಿ ಸರ್ಕಾರ ರಚಿಸಿದೆ. ಅಧಿಕಾರಕ್ಕಾಗಿ ಏಕನಾಥ ಶಿಂಧೆಯನ್ನು ಶಿವಸೇನೆಯಿಂದ ಹೊರಗೆ ಬರುವಂತೆ ಮಾಡಿ ಹಿಂದೂ ಹುಲಿ ಬಾಳಾಠಾಕ್ರೆಯ ಶಿವಸೇನೆಯನ್ನು ಎರಡು ಭಾಗವಾಗಿ ಮಾಡಿ ಉದ್ಧವ್ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಮರಾಠಿಗರ ಅಸ್ಮಿತೆಯನ್ನು ಕೆರಳಿಸಿದೆ.
ಬಾರಾಮತಿ ಕ್ಷೇತ್ರದಲ್ಲಿ ಎನ್ ಸಿ ಪಿಯ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಮಹಾ ವಿಕಾಸ್ ಅಘಾಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಅವರ ಎದುರಾಳಿಯಾಗಿ ಡಿಸಿಎಂ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಮಹಾಯುತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಜಿತ್ ಪವಾರ್ 70 ಸಾವಿರ ಕೋಟಿ ನೀರಾವರಿ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಎನ್.ಸಿ.ಪಿ ಒಡೆದು ಅಜಿತ್ ಪವಾರ್ ಅವರನ್ನು ಡಿಸಿಎಂ ಮಾಡಿದೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಅಜಿತ್ ಪವಾರ್ ಪತ್ನಿ ಸುನೇತ್ರ ಪವಾರ್ ಅವರಿಗೆ ಕ್ಲೀನ್ ಚಿಟ್ ನೀಡಿದ ಬಿಜೆಪಿ ಸರ್ಕಾರದ ವಿರುದ್ಧ ಜನರು ಆಕ್ರೋಶ ಗೊಂಡಿದ್ದಾರೆ. ಅಧಿಕಾರಕ್ಕಾಗಿ ಬಾಳಾಟಾಕ್ರೆ ಕಟ್ಟಿದ ಶಿವಸೇನೆ ಹಾಗೂ ಎನ್.ಸಿ.ಪಿ ಯ ಶರದ್ ಪವಾರ್ ಕುಟುಂಬವನ್ನು ಒಡೆದ ಬಿಜೆಪಿಯ ಬಗ್ಗೆ ಮರಾಠಿಗರು ಆಕ್ರೋಶ ಗೊಂಡಿದ್ದಾರೆ.
ಶಿವಸೇನೆ, ಎನ್ ಸಿ ಪಿ, ಕಾಂಗ್ರೆಸ್ ನೇತೃತ್ವದಲ್ಲಿ ಮಹಾ ವಿಕಾಸ್ ಅಘಾಡಿ ಮಹಾರಾಷ್ಟ್ರದಲ್ಲಿ 48 ಸ್ಥಾನಗಳಲ್ಲಿ ಹೆಚ್ಚು ಸ್ಥಾನ ಪಡೆಯುವ ಸಂಭವ ಕಾಣಿಸುತ್ತಿದೆ. ಉದ್ಧವ್ ಠಾಕ್ರೆಯನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಮಾಡಿದ ಕುತಂತ್ರ ರಾಜಕಾರಣಕ್ಕೆ ಈ ಬಾರಿ ಜನರು ಸರಿಯಾದ ಶಾಸ್ತಿ ಮಾಡಲಿದ್ದಾರೆ ಎಂಬ ವರದಿಗಳಿವೆ.