ಮಂಡ್ಯ ಜಿಲ್ಲೆಯಲ್ಲಿ ನೀರಿನ ಅಭಾವದಿಂದ ₹ 3,600 ಕೋಟಿ ಬೆಳೆ ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿತ್ತು, ಇದೀಗ ಅದರ ಮೊತ್ತ 5,000 ಕೋಟಿಗೆ ಹೆಚ್ಚಳವಾಗಿದೆ, ಆದ್ದರಿಂದ ರೈತರ ಬೆಳೆ ನಷ್ಟಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕೆಂದು ಜಿಲ್ಲಾ ರೈತ ಹಿತರಕ್ಷಣ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ್ ಒತ್ತಾಯಿಸಿದರು.
ಮಂಡ್ಯ ನಗರದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ ಅವರನ್ನು ಭೇಟಿಯಾಗಿ ಮಾತನಾಡಿದ ಅವರು, ಜಿಲ್ಲೆಯ 71,000 ರೈತರಿಗೆ 14 ಕೋಟಿ ಬೆಳೆ ನಷ್ಟ ಪರಿಹಾರವನ್ನು ಪಾವತಿ ಮಾಡಲಾಗಿದೆ ಎಂಬ ಮಾಹಿತಿ ಇದೆ, ಆದರೆ ಆದರೆ ಯಾವೊಬ್ಬ ರೈತರು ಪರಿಹಾರ ದೊರಕಿರುವ ಬಗ್ಗೆ ಖಾತ್ರಿ ಮಾಡಿಲ್ಲ ಎಂದು ತಿಳಿಸಿದರು.
ಮಳೆ ಅಭಾವದಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಸರ್ಕಾರ ಬೆಳೆ ಪರಿಹಾರ ಪಾವತಿ ಮಾಡಿದೆ ಎಂದು ಹೇಳುತ್ತಿದ್ದರೂ ರೈತರಿಗೆ ತಲುಪಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಬರ ಪರಿಸ್ಥಿತಿಯಿಂದ ಭೂಮಿ ಬಾಯಿಬಿಟ್ಟಿದೆ, ಜನ -ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ, ನಾಲೆಗಳಿಗೆ ನೀರು ಹರಿಸಿ ಎಂದು ಒತ್ತಡ ಮಾಡುತ್ತಿದ್ದರೂ ಸರ್ಕಾರ ಮೌನ ವಹಿಸಿದೆ, ಚಿಕ್ಕದೇವರಾಯನಾಲೆ, ರಾಮಸ್ವಾಮಿ ನಾಲೆ ಗೆ ನೀರು ಹರಿಸಿದ್ದರು ಯಾವುದೇ ಮಾಹಿತಿ ಇಲ್ಲ. ವಿಶ್ವೇಶ್ವರಯ್ಯ ನಾಲೆಗೆ ಈ ತಕ್ಷಣ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.
ಜೂನ್ ನಲ್ಲಿ ಮೈಸೂರು ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಿಸಬೇಕು, ಆದರೆ ಈ ಬಗ್ಗೆ ಪೂರ್ವ ಸಿದ್ಧತೆ ಕೈಗೊಂಡಿಲ್ಲ, ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರು ನಿರ್ಲಕ್ಷ್ಯ ತೋರಿದ್ದಾರೆ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, ಆದಷ್ಟು ಶೀಘ್ರವಾಗಿ ಸಭೆ ಕರೆದು ಚರ್ಚೆಗೆ ಕಾರ್ಖಾನೆ ಆರಂಭಕ್ಕೆ ತುರ್ತು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಕೃಷ್ಣಪ್ರಕಾಶ್, ಕರವೇ ಶಂಕರೇಗೌಡ, ತಾಯಮ್ಮ, ಮೊತ್ತಹಳ್ಳಿ ಕೆಂಪೇಗೌಡ. ಫಯಾಜ್ ಇತರರು ಉಪಸ್ಥಿತರಿದ್ದರು.