ಡಾ.ಬೆಸಗರಹಳ್ಳಿ ರಾಮಣ್ಣ ಅವರ ಕಥೆಗಳ ಆಧಾರಿತ “ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು” ಕುರಿತ ರಂಗ ಪ್ರಯೋಗವು ಫೆ.19ರಂದು ಸಂಜೆ 6.30ಗಂಟೆಗೆ ಮಂಡ್ಯ ನಗರದ ಪಿ.ಇ.ಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶಕ್ಕಾಗಿ ನಾವು ಇದ್ದೇವೆ ಎನ್ನುವುದಕ್ಕಿಂತ ದೇಶ ನಮಗಾಗಿ ಇದೆ” ಎಂದು ಗಾಢವಾಗಿ ನಂಬಿರುವ ರಾಜಕಾರಣಿಗಳೇ ಎಲ್ಲಾ ಕಡೆ ತುಂಬಿ ತುಳುಕಾಡುತ್ತಿರುವ ಈ ಹೊತ್ತಿನಲ್ಲಿ, ಗಾಂಧೀಜಿಯವರು ಕನಸಿದ ಸೇವೆಗಿರುವ ಅರ್ಥವು ಎಲ್ಲಾ ರೀತಿಯಲ್ಲೂ ಭ್ರಷ್ಟಗೊಂಡು ಜನಜೀವನವು ನೈತಿಕ ಅವನತಿಯತ್ತ ಸಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಅಧಃಪತನವನ್ನು ತಡೆಯಬಲ್ಲ ಶಕ್ತಿ ಕಲಾ ಮಾಧ್ಯಮಗಳಿಗೆ ಮಾತ್ರ ಸಾಧ್ಯ ಪ್ರಜಾಪ್ರಭುತ್ವದ ಪ್ರೀತಿ-ನಿರ್ಭೀತಿಯ ವಾತಾವರಣ ವನ್ನು ಜೋಪಾನ ಮಾಡಬಲ್ಲ ಸೃಜನಶೀಲ ಚಟುವಟಿಕೆಗಳಿಗೆ ಸಮಾಜವು ನಿರಂತರ ಪ್ರೋತ್ಸಾಹ ನೀಡುವುದರಿಂದ ಅದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಪ್ರೊ.ಹುಲ್ಕೆರೆ ಮಹದೇವು ಉಪಸ್ಥಿತರಿದ್ದರು.