ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಸರಗಳ್ಳನೊಬ್ಬನನ್ನು ಬಂಧಿಸಿ, ಆತನಿಂದ 69.5 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ₹ 3.40 ಲಕ್ಷ ಎಂದು ಅಂದಾಜಿಸಲಾಗಿದೆ.
ಘಟನೆಯ ವಿವರ
ಕಳೆದ ಆ.16,2022 ರಂದು ಶ್ರೀರಂಗಪಟ್ಟಣ ತಾಲ್ಲೂಕು ಕಡತನಾಳು ಗ್ರಾಮದ ವ್ಯಕ್ತಿಯೊಬ್ಬರು ಠಾಣೆಗೆ ಹಾಜರಾಗಿ ರಾತ್ರಿ ವೇಳೆಯಲ್ಲಿ ತಮ್ಮ ಮನೆಗೆ ಯಾರೋ ಕಳ್ಳರು ನುಗ್ಗಿ ಮನೆಯೊಳಗೆ ರೂಮಿನಲ್ಲಿ ಮಲಗಿದ್ದ ನನ್ನ ಮಗಳ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಹಾಗೂ ಒಂದು ಮೊಬೈಲ್ ಫೋನ್ ಹಾಗೂ ವ್ಯಾನಿಟಿ ವ್ಯಾಗಿನಲ್ಲಿದ್ದ ₹ 30 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರು ನೀಡಿದ್ದರು.
ಈ ಪ್ರಕರಣದ ಆರೋಪಿ ಪತ್ತೆಗಾಗಿ ಇನ್ಸ್ ಪೆಕ್ಟರ್ ಬಿ.ಜೆ.ಕುಮಾರ್, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಪಿ.ಎಸ್.ಐ ರವಿ ಬಿ.ಜೆ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ಈ ತಂಡವು ಕೆ.ಆರ್.ಪೇಟೆ ತಾಲ್ಲೂಕಿನ ಬಿಲ್ಲೇನಹಳ್ಳಿ ಗ್ರಾಮದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದೆ.
ವಿಚಾರಣೆ ಸಂದರ್ಭದಲ್ಲಿ ಈ ಆರೋಪಿಯು ಕಡತನಾಳು ಮನೆಯ ಮುಂಭಾಗದಲ್ಲಿನ ಕಿಟಕಿಯ ಮುಖಾಂತರ ಮುಂದಿನ ಬಾಗಿಲನ್ನು ತೆಗೆದುಕೊಂಡು ಒಳಗೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿದ್ದನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಈ ಹಿಂದೆ ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿರುವ ಹಣ್ಣಿನ ಅಂಗಡಿಯಲ್ಲಿ ಬ್ಯಾಗ್ ನಲ್ಲಿದ್ದು ಒಂದು ಚಿನ್ನದ ಚೈನು, ಒಂದು ಜೊತೆ ಚಿಕ್ಕ ಕಿವಿ ಓಲೆ ಮತ್ತು ನಗದು ಹಣವನ್ನು ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾನೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.