ಹೆಚ್ಚು ಉತ್ಪನ್ನಗಳನ್ನು ಉತ್ಪಾದನೆ ಮಾಡುವುದರಿಂದ ಹಾಲಿಗೆ ಹೆಚ್ಚು ಬೆಲೆ ನೀಡಲು ಸಾಧ್ಯವಿದೆ, ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕೆಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಿಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ಶುಕ್ರವಾರ ನಡೆದ ಮೆಗಾ ಡೈರಿ ಉದ್ಘಾಟನಾ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಭಾರತದ ಶಕ್ತಿ ರೈತರು. ದೇಶದಲ್ಲಿ ಶೇ.65ರಷ್ಟು ರೈತರು ಕೃಷಿಯನ್ನೆ ಅವಲಂಬಿಸಿದ್ದಾರೆ. ದೇಶದ ಜಿಡಿಪಿಗೆ ಇವರ ಕೊಡುಗೆ ಶೇ.20ರಷ್ಟಿದೆ. ಹಾಗಾಗಿ ಸರ್ಕಾರಗಳು ರೈತ ಕೇಂದ್ರಿತವಾಗಿ ಕೆಲಸ ಮಾಡಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಲಿನ ಉತ್ಪಾದನೆಯಲ್ಲಿ ಕೈಜೋಡಿಸಿದ್ದಾರೆ, ಅವರಿಗೆ ನೆರವಾಗುವ ಕೆಲಸ ಮಾಡಬೇಕಿದೆ ಎಂದರು.
ರೈತರ ಬೇಡಿಕೆ ಈಡೇರಿಸುವ ಭರವಸೆ ಇದೆ
ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಂತೆ ರಾಜ್ಯದ ವಿವಿಧೆಡೆ ರೈತರು ಹೋರಾಟ ನಡೆಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಕ್ಕರೆ ಸಚಿವರನ್ನು ತಮ್ಮ ಮಠಕ್ಕೆ ಕಳುಹಿಸಿ ಮಾಹಿತಿ ಪಡೆದಿದ್ದಾರೆ, ಅವರು ಶೀಘ್ರವೇ ರೈತರ ಸಮಸ್ಯೆಗಳಿಗೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ ಎಂದು ನಿರ್ಮಲಾನಂದಶ್ರೀ ಹೇಳಿದರು.
ಅಕ್ರಮಗಳಿಗೆ ತಡೆ ಹಾಕಿ : ಹೆಚ್.ಡಿ.ದೇವೇಗೌಡ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತನಾಡಿ, ಇಂದು ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಅನ್ಯಾಯಗಳು ನಡೆಯುತ್ತಿವೆ. ಸಹಕಾರಿ ಬ್ಯಾಂಕುಗಳು, ಸಹಕಾರಿ ಸಂಘಗಳಲ್ಲಿ ಹಲವು ಅಕ್ರಮಗಳು ನಡೆದಿವೆ, ಇದರಿಂದ ಸಹಕಾರ ಸಂಘಗಳನ್ನು ನಂಬಿದ ಜನರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರೇ ಜವಾಬ್ದಾರಿ ತೆಗೆದುಕೊಂಡು ಅಕ್ರಮಗಳಿಗೆ ತಡೆ ಹಾಕಬೇಕೆಂದು ಮನವಿ ಮಾಡಿದರು.