ಸಿರಿಧಾನ್ಯ ಆರೋಗ್ಯಕ್ಕೆ ಮುಖ್ಯವಾದದ್ದು ಹಾಗೂ ಅತ್ಯಮೂಲ್ಯ ಆಹಾರವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ ತಿಳಿಸಿದರು.
ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸಿರಿಧಾನ್ಯಮೇಳದಲ್ಲಿ ಸಿರಿಧಾನ್ಯ ಕುರಿತು ಉಪನ್ಯಾಸ ನೀಡಿದ ಅವರು, ರಾಜ್ಯದಲ್ಲಿ 9 ರೀತಿ ಸಿರಿಧಾನ್ಯ ಹಾಗೂ ಪ್ರಪಂಚದಲ್ಲಿ 6000ಕ್ಕೂ ವಿವಿಧ ರೀತಿಯ ಸಿರಿಧಾನ್ಯಗಳಿವೆ. ಸಿರಿಧಾನ್ಯ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಸೇವಿಸಿದರೆ ರೋಗ ನಿರೋಧಕ ಶಕ್ತಿ, ಉಷ್ಣತೆ ಹೆಚ್ಚಿಸುತ್ತದೆ. ಮಧುಮೇಹ ಇರುವವರಿಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ವಿವರಿಸಿದರು.
ಎರಡು ಅಥವಾ ಮೂರು ರೀತಿಯ ಸಿರಿಧಾನ್ಯ ಒಟ್ಟಿಗೆ ಮಿಶ್ರಣವನ್ನು ಸೇವಿಸುವುದು ಉತ್ತಮ. ಇಂದು ಔಷಧಿಯನ್ನು ಆಹಾರಕ್ಕೆ ಸಮವಾಗಿ ಸೇವಿಸುತ್ತಿರುವುದು ಶೋಚನೀಯ ವಿಷಯ. ರೋಗ ಬರುವ ಮೊದಲೇ ಅದನ್ನು ತಡೆಗಟ್ಟಬೇಕು. ನಾವು ಸೇವಿಸುವ ಆಹಾರ ಪೌಷ್ಠಿಕಾಂಶದಿಂದ ಕೂಡಿರಬೇಕು. ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಆಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅಪಘಾತ ಹಾಗೂ ಯಾವುದೇ ರೀತಿಯ ತುರ್ತು ಸ್ಥಿತಿಯಲ್ಲಿ ಮಾತ್ರ ಆಸ್ಪತ್ರೆಯ ಹೋಗಬೇಕು. ಆಗ ನಾವು ಆರೋಗ್ಯವಾಗಿದ್ದೇವೆ ಎಂದು ಭಾವಿಸಬಹುದು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ವಿ. ಎಸ್ ಅಶೋಕ್ ಮಾತನಾಡಿ, ಕೃಷಿಯು ಉದ್ದಿಮೆಯಾಗಿ ಬೆಳೆಯಬೇಕು. ರೈತರು ಬೆಳೆದ ಬೆಳೆಗೆ ಗರಿಷ್ಠ ಮಾರಾಟದ ಬೆಲೆ ಸಿಗಲು ರೈತರು ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡು ನೇರವಾಗಿ ತಾವು ಬೆಳೆದ ಬೆಳೆ ಗ್ರಾಹಕರ ಕೈ ಸೇರುವಂತೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರೊ.ಕೃಷ್ಣೇಗೌಡ ಅವರು ಉತ್ತಮ ಆರೋಗ್ಯ ಕುರಿತು ಹಿಂದೆ ಇದ್ದ ಆಹಾರ, ವ್ಯಾಯಾಮ, ಕೃಷಿ ಪದ್ಧತಿ ಹಾಗೂ ಇಂದಿನ ಆಧುನಿಕ ಜೀವನ ಶೈಲಿ ಕುರಿತು ವಿಚಾರ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸೌಮ್ಯಶ್ರೀ, ಬೆಲ್ಲದ ವ್ಯಾಪಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಗೌಡ ಸೇರಿದಂತೆ ಇನ್ನಿತರರ ಅಧಿಕಾರಿಗಳು ಉಪಸ್ಥಿತರಿದ್ದರು.