ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿರುದ್ಧ ಮಾತನಾಡಿ ಹೀರೋ ಆಗುತ್ತೇನೆ ಅಂದು ಕೊಂಡಿದ್ದರೆ ಅದು ಭ್ರಮೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಪಾಂಡವಪುರ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ತಿರುಗೇಟು ನೀಡಿದರು.
ಪಾಂಡವಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ಚಲುವರಾಯಸ್ವಾಮಿ ಅವರು ಜಿ.ಪಂ ಸದಸ್ಯರಾಗಿ, ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ಒಮ್ಮೆ ಸಂಸದರಾಗಿ ಮಂಡ್ಯ ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಮೆಡಿಕಲ್ ಕಾಲೇಜು, ಆರ್ ಟಿಒ ಕಚೇರಿ, ಬಸ್ ಡಿಪೋಗಳು ಸೇರಿದಂತೆ ಜಿಲ್ಲೆ ಜನರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಜಿಲ್ಲೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಕೊಡುಗೆ ಏನೇನೂ ಇಲ್ಲ ಎಂದು ತಿಳಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಜಿಲ್ಲೆಗೆ 8 ಸಾವಿರ ಕೋಟಿ ರೂ. ಕೊಡುಗೆ ನೀಡಿದ್ದರು, ಈ ಅನುದಾನ ವಾಪಸ್ ಹೋಗಲು ಚಲುವರಾಯಸ್ವಾಮಿ ಕಾರಣ ಎಂದು ಹೇಳುವ ರವೀಂದ್ರ ಶ್ರೀಕಂಠಯ್ಯ ಇಷ್ಟು ದಿನ ಏನು ಮಾಡ್ತಾ ಇದ್ದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪುಕ್ಕಟೆ ಪ್ರಚಾರಕ್ಕೆ ಮುಂದಾಗಿರುವ ರವೀಂದ್ರ ಶ್ರೀಕಂಠಯ್ಯ, ಈ ಹಿಂದೆ ಸಂಸದೆ ಸುಮಲತಾ ಅವರ ಬಗ್ಗೆ ಮಾತನಾಡಿ ಹೀರೋ ಆಗಲು ಮುಂದಾಗಿದ್ದರು. ಅದು ನಡೆಯಲಿಲ್ಲ. ಇದೀಗ ಚಲುವರಾಯಸ್ವಾಮಿ ಅವರನ್ನು ಟೀಕಿಸುವ ಮೂಲಕ ರಾಜ್ಯ ನಾಯಕರಾಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.