ಮಳವಳ್ಳಿ ತಾಲ್ಲೂಕಿನಲ್ಲಿ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು, ಕೂಡಲೇ ಡಾಂಬರೀಕರಣ ಮಾಡದಿದ್ದರೆ ಕೃಷಿ ಕೂಲಿಕಾರರ ಸಂಘದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ ಎಚ್ಚರಿಕೆ ನೀಡಿದರು.
ಮಳವಳ್ಳಿ ಪಟ್ಟಣದ ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ಸಂಘದ 8 ನೇ ರಾಜ್ಯ ಸಮ್ಮೇಳನದ ಪ್ರಚಾರದ ಬಿತ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು,ತಾಲ್ಲೂಕಿನ ಅಗ್ರಪುರದಲ್ಲಿ ನಡೆದಿರುವ ಸೇತುವೆ ನಿರ್ಮಾಣದ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ತಾಲ್ಲೂಕಿನ ಬಹುಪಾಲು ರಸ್ತೆಗಳು ಗುಂಡಿ ಬಿದ್ದು ಪ್ರಯಾಣಿಕರಿಗೆ ತ್ರೀವ್ರ ತೊಂದರೆಯಾಗುತ್ತಿದೆ, ಆಗತ್ಯ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದರು.
ಕೃಷಿ ಕೂಲಿಕಾರರ ಸಂಘದ ತಳಗವಾದಿ ವಲಯ ಪ್ರಧಾನ ಕಾರ್ಯದರ್ಶಿ ತಳಗವಾದಿ ಆನಂದ್ ಮಾತನಾಡಿ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ 8ನೇ ರಾಜ್ಯ ಸಮ್ಮೇಳನವು ಬಾಗೇಪಲ್ಲಿಯಲ್ಲಿ ನ.29ರಂದು ನಡೆಯಲಿದೆ. ಮಧ್ಯಾಹ್ನ 12ಗಂಟೆಗೆ ಬಹಿರಂಗ ಸಭೆಯನ್ನು ಸಂಸತ್ ಮಾಜಿ ಸದಸ್ಯ ಎ.ವಿಜಯರಾಘವನ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಪ್ರೀಂಕೊರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ರಾಜ್ಯಸಭಾ ಸದಸ್ಯ ಶಿವದಾಸನ್, ಸಂಘದ ಪ್ರಧಾನ ಕಾರ್ಯದರ್ಶಿ ಬಿ ವೆಂಕಟ್, ರಾಜ್ಯ
ಉಪಾಧ್ಯಕ್ಷೆ ಕೆ.ಎಸ್. ಲಕ್ಷ್ಮಿ, ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು. ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಶಿವಕುಮಾರ್, ಪಾಪಣ್ಣ, ರಾಮಣ್ಣ, ದೊಡ್ಡ ಮರಿಗೌಡ ಇದ್ದರು.