ಜನತಾದಳ ಒರಿಜಿನಲ್ ನಾವೇ, ನಾನು ಅದರ ಅಧ್ಯಕ್ಷ, ನಾವು ಯಾವುದೇ ಕಾರಣಕ್ಕೂ ಎನ್ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ, INDIA ಮೈತ್ರಿ ಒಕ್ಕೂಟಕ್ಕೆ ನಮ್ಮ ಬೆಂಬಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಘೋಷಿಸಿದ್ದಾರೆ.
ಸೋಮವಾರ ಚಿಂತನ ಮಂಥನ ಸಭೆ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹೀಂ, ಜನತಾದಳ ಒರಿಜಿನಲ್ ನಾವೇ, ನಾನು ಅದರ ಅಧ್ಯಕ್ಷ, ನನ್ನನ್ನು ಯಾರೂ ತೆಗೆಯಲು ಸಾಧ್ಯವಿಲ್ಲ, ಮೀಟಿಂಗ್ ಮಾಡಿ ಅಭಿಪ್ರಾಯ ತೆಗೆದು ತೆಗೆಯಬೇಕು. ಇಂಡಿಯಾ ಮೈತ್ರಿ ಕೂಟದ ನಾಯಕರು ನಮ್ಮ ಜೊತೆ ಮಾತನಾಡಿದ್ದಾರೆ. ಜೈಲಿನಲ್ಲಿ ಹುಟ್ಟಿದವರು ನಾವು, ಪ್ರಾಣ ಕೊಡುತ್ತೇವೆ, ಆದರೆ ಸಿದ್ದಾಂತ ಎಂದು ಬಿಟ್ಟುಕೊಡಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಕುಮಾರಸ್ವಾಮಿಗೆ ಚೆನ್ನಪಟ್ಟಣದಲ್ಲಿ 20,000 ಜನ ಮುಸ್ಲಿಮರು ಮತ ಹಾಕಿದ್ದಾರೆ. ಎಂಎಲ್ಎ ಆಗಿದ್ದಕ್ಕೆ ಅಮಿತ್ ಶಾ ಕರೆದಿದ್ದಾರೆ. ಇಲ್ಲದಿದ್ದರೆ ಅಮಿತ್ ಶಾ ಕರೆಯುತ್ತಿರಲಿಲ್ಲ. ನಿಮ್ಮ ಮಗ ನಿಂತಾಗ ಮುಸ್ಲಿಂ ಅಭ್ಯರ್ಥಿ ಕಾಂಗ್ರೆಸ್ನಲ್ಲಿ ಇದ್ದರೂ ನಿಮಗೆ ಮತ ಹಾಕಿದ್ದಾರೆ. ದೇವೇಗೌಡರ ಮನಸ್ಸಿನಲ್ಲಿ ನೋವು ಇದೆ. ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ಟೀಕೆ ಮಾಡಲ್ಲ. ಕೇರಳ, ತಮಿಳುನಾಡು ಜೆಡಿಎಸ್ ಎನ್ಡಿಎ ಜೊತೆ ಹೋಗಲ್ಲ ಎಂದು ತೀರ್ಮಾನ ಮಾಡಿದೆ, ಯಾವುದೇ ಕಾರಣಕ್ಕೂ ನಾವು ಎನ್ಡಿಎ ಜೊತೆ ಹೋಗಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಬಿಜೆಪಿ ಜೊತೆ ಹೋಗುವುದಿಲ್ಲ ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ತಿಳಿಸುತ್ತೀವಿ. ನೀವು ಯಾವುದೇ ಕಾರಣಕ್ಕೂ ಮೈತ್ರಿಗೆ ಒಪ್ಪಿಗೆ ಕೊಡಬಾರದು ಅಂಥಾ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಿಮ್ಮ ನಿಲುವು ಒಪ್ಪದೆ ಹೋದರೆ ಕುಮಾರಸ್ವಾಮಿರನ್ನ ಉಚ್ಚಾಟನೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚಾಟನೆಗೆ ಕಾಲ ಪಕ್ವ ಆಗಿಲ್ಲ. ನಾನು ಸಹೋದರ ಇದ್ದಂತೆ, ನಾನೇ ಜೆಡಿಎಸ್ ಬಿಟ್ಟು ಹೋಗ್ತೀನಿ ಅಂತಾರೆ, ಏನ್ ಮಾಡಲಿ. ನಾನು ಜೆಡಿಎಸ್ ಬಿಟ್ಟು ಹೋಗುವುದಿಲ್ಲ. ಜಿಲ್ಲಾಧ್ಯಕ್ಷರು ನಿಮ್ಮ ಜೊತೆಗೆ ಇರುತ್ತೇವೆ ಎಂದು ಪತ್ರ ಬರೆದಿದ್ದಾರೆ. ನಮ್ಮ ಮನೆ ಬಿಟ್ಟು ನಾನು ಯಾಕೆ ಹೋಗಲಿ ಎಂದು ಪ್ರಶ್ನಿಸಿದ್ದಾರೆ.