ಮಂಡ್ಯನಗರದ ಸಂಜಯ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಯೋಜಿಸಿದ್ದ ಡಾ.ಪುನೀತ್ ರಾಜ್ಕುಮಾರ್ 2ನೇ ವರ್ಷ ಪುಣ್ಯಸ್ಮರಣೆ- ರೈತರಿಗೆ ತೆಂಗಿನ ಸಸಿ ವಿತರಣಾ ಕಾರ್ಯಕ್ರಮಕ್ಕೆ ಸಿನಿಮಾ ನಿರ್ಮಾಪಕ ವೈ.ಎಸ್.ಶಂಕರೇಗೌಡ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಹು ಉಪಯೋಗಿ ಶ್ರೇಷ್ಠತೆ ಪಡೆದುಕೊಂಡಿರುವ ಕಲ್ಪವೃಕ್ಷ ಸಸಿಗಳನ್ನು ನೀಡಿ ಡಾ.ಪುನೀತ್ರಾಜ್ಕುಮಾರ್ ಅವರನ್ನು ಸ್ಮರಿಸಿಕೊಳ್ಳುತ್ತಿರುವುದು ಉತ್ತಮ ಸೇವಾಕಾರ್ಯವಾಗಿದೆ, ಅವರು ನಡೆದು ಬಂದ ಹೆಜ್ಜೆಗಳನ್ನು ಮತ್ತು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವುದು ಅತ್ಯವಶ್ಯಕ ಎಂದು ನುಡಿದರು.
ಪುನೀತ್ ಅವರು ಜನಜನೀತ ಕಾರ್ಯಗಳನ್ನು ಮಾಡಿದ್ದಾರೆ, ಅದು ಎಲ್ಲರಿಗೂ ಗೊತ್ತು, ಸರಳಜೀವಿ, ನಗುವಿನ ಒಡೆಯರಂತೆ ಸಿನಿಮಾರಂಗ ಮತ್ತು ಕನ್ನಡವನ್ನು ಅಪ್ಪಿಕೊಂಡಿದ್ದ ಅಪ್ಪುಅವರನ್ನು ಕಳೆದುಕೊಂಡು 2 ವರ್ಷಗಳಾಗಿವೆ, ಎಲ್ಲರಿಗೂ ಹೃದಯ ಭಾರವಾಗುತ್ತದೆ, ದು:ಖ ಬರಿಸುವ ಶಕ್ತಿ ಲಭಿಸಲಿ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಅಧ್ಯಕ್ಷ ಕೆ.ಟಿ.ಶಂಕರೇಗೌಡ ಮಾತನಾಡಿ, ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಲ್ಲೇ ನೋಡಿ ಆಶೀರ್ವಾದ ಮಾಡುವ ಕಲಾರಸಿಕರನ್ನು ಅಭಿನಂದಿಸುತ್ತೇವೆ, ರಕ್ಷಣಾ ವೇದಿಕೆಯಿಂದ ಇಂದು ಡಾ.ಪುನೀತ್ರಾಜ್ಕುಮಾರ್ ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ, ಅನ್ನಸಂತರ್ಪಣೆ ಮಾಡಿ, ತೆಂಗಿನ ಸಸಿಗಳನ್ನು ವಿತರಿಸುತ್ತಿದ್ದೇವೆ, ಸಸಿ ಪಡೆದುಕೊಂಡವರು ಪುನೀತ್ ಹೆಸರಿಟ್ಟು ಪೋಷಿಸಿ ಎಂದರು.
ಕಾರ್ಯಕ್ರಮದಲ್ಲಿ ಕರವೇ ಪದಾಧಿಕಾರಿಗಳಾದ ಭಾರತಿ, ಡಿ.ಅಶೋಕ್, ಕಾಮಧೇನು ರಮೇಶ್, ಬೋರೇಗೌಡ, ಮಹೇಶ್, ಸತೀಶ್ ಮತ್ತಿತರರಿದ್ದರು.