ಸಂಸದೆ ಸುಮಲತಾ ಅಂಬರೀಶ್ ಕುರಿತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಹೆಚ್.ಎನ್ ರವೀಂದ್ರ ನೀಡಿರುವ ಅತಿರೇಕದ ಮಾತುಗಳು ಖಂಡನೀಯ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಆರ್ಎಪಿಸಿಎಂಎಸ್ ನಿರ್ದೇಶಕ ಬೇಲೂರು ಸೋಮಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ.ಹೆಚ್.ಎನ್.ರವೀಂದ್ರ ನಿಂತಲ್ಲಿ ನೆಲೆ ಕಾಣದ ವ್ಯಕ್ತಿತ್ವದವರು. ಸ್ವತಃ ಅಂಬರೀಶ್ ಅವರ ಒಡನಾಡಿಯಾಗಿದ್ದ ಕೆ.ಬಿ. ನರಸಿಂಹೇಗೌಡರ ಮಗನಾಗಿ ಸುಶಿಕ್ಷಿತ ಪದವೀಧರಾಗಿರುವ ಅವರು, ಸುಮಲತಾರವರ ಬಗ್ಗೆ ಕೀಳು ಅಭಿರುಚಿಯ ಪದ ಪ್ರಯೋಗ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಲವು ನಾಯಕರು ಸುಮಲತಾರವರ ಬಗ್ಗೆ ಮಾತನಾಡಿದಾಗ ನನ್ನ ಅಣ್ಣ ನನ್ನ ಅಂಬಿ, ನನ್ನ ಜಿಲ್ಲೆ, ನನ್ನ ಅತ್ತಿಗೆ, ನನ್ನ ತಮ್ಮ ಅಭಿಷೇಕ್, ನನ್ನ ಸ್ವಾಭಿಮಾನಿ ಜಿಲ್ಲೆಯ ಸೊಸೆಯಾದ ಸುಮಲತಾ ಎಂತಲೇ ಮಾತನಾಡಿ ಈಗ ಸುಮಲತಾ ಅವರನ್ನು ಟೀಕಿಸುವುದು ಖಂಡನೀಯ ಎಂದು ಹೇಳಿದರು.
ಒಂದು ಪಕ್ಷದಲ್ಲಿ ಇದ್ದುಕೊಂಡು ಅದೇ ಪಕ್ಷದ ಧೋರಣೆಯನ್ನು ಖಂಡಿಸುವ ಡಾ.ಹೆಚ್.ಎನ್.ರವೀಂದ್ರ ಛಲಗಾರಿಕೆ ಶ್ಲಾಘನೀಯ, ಆದರೆ ರಾಜಕೀಯ ನೆಲೆಗಾಗಿ ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ಮತ್ತೊಬ್ಬರನ್ನು ತೆಗಳುವ ರಾಜಕೀಯ ಮಾತುಗಳು ಸರಿಯಲ್ಲ, ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಅಂಬರೀಶ್ ಅಭಿಮಾನಿಗಳಾದ ಹೊಳಲು ಗಣೇಶ್, ಚನ್ನೇಗೌಡ, ಮಹದೇವಮ್ಮ, ಶ್ರೀನಿವಾಸ್ ಉಪಸ್ಥಿತರಿದ್ದರು.