ಮದ್ದೂರು ತಾಲೂಕು ಭಾರತೀನಗರದ ಭಾರತಿ ಕಾಲೇಜಿನಲ್ಲಿ 2023ರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕ ಮಧು ಜಿ ಮಾದೇಗೌಡ ಅಭಿನಂದಿಸಿದರು.
ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಭಾರತಿ ಸಂಯುಕ್ತ ಪಿಯು ಕಾಲೇಜು, ಡಾ. ಜಿ.ಮಾದೇಗೌಡ ಕಾಲೇಜ್ ಆಫ್ ಎಕ್ಸಲೆನ್ಸ್ ಸಹಯೋಗದಲ್ಲಿ ನಡೆದ ಫ್ರೆಶರ್ಸ್ ಡೇ ಆಚರಣೆ, 2023 ರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಟಾಪರ್ಸ್ ಗಳಿಗೆ ಅಭಿನಂದನೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಮೊಬೈಲ್, ಸೋಷಿಯಲ್ ಮೀಡಿಯ ಮೇಲಿನ ವ್ಯಾಮೋಹ ಜಾಸ್ತಿಯಾಗಿ ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಕೆಲವು ಮಾಹಿತಿಗಳಿಗೆ ಸೋಷಿಯಲ್ ಮೀಡಿಯ ಅವಶ್ಯಕತೆ ಇದೆ, ಆದರೆ ಮಿತಿಯಲ್ಲಿರಲಿ ಎಂದು ಕಿವಿಮಾತು ಹೇಳಿದರು.
ವಿದ್ಯಾಭ್ಯಾಸದ ಕಡೆ ಗಮನ ಕೇಂದ್ರೀಕರಿಸಿ ಉತ್ತಮ ಅಂಕ ಗಳಿಸಿರಿ, ತಮ್ಮ ವಿದ್ಯಾಭ್ಯಾಸದ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಕಾಲೇಜನ್ನು ರೈತಾಪಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಡೆಸುತಿದ್ದೇವೆ. ಹಣ ಮಾಡಬೇಕೆಂದಿದ್ದರೆ ಬೆಂಗಳೂರಿನಲ್ಲಿ ಕಾಲೇಜುಗಳನ್ನು ತೆರೆಯಬಹುದಿತ್ತು. ನಮಗೆ ಹಣ ಮಾಡುವ ಉದ್ದೇಶವಿಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬುವುದು ನಮ್ಮ ಆಶಯ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕ ರೇವಣ್ಣ, ಭಾರತೀ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.