ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಬಿ.ಫಾರಂ ಪಡೆದಿರುವ ಗಣಿಗ ರವಿಕುಮಾರ್ ಅವರಿಗೆ ಮಂಡ್ಯ ನಗರಸಭೆಯ ಎಲ್ಲಾ ಕಾಂಗ್ರೆಸ್ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳ ಸಂಪೂರ್ಣ ಬೆಂಬಲವಿದೆ ಎಂದು ಮಂಡ್ಯನಗರ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ ಹಾಗೂ ನಗರಸಭೆಯ ಹಿರಿಯ ಸದಸ್ಯ ರಾಮಲಿಂಗಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಪಿ.ರವಿಕುಮಾರ್ (ಗಣಿಗ)ರವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.
ಪಿ.ರವಿಕುಮಾರ್ ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತರೂ ಸಹ ಕ್ಷೇತ್ರವನ್ನು ಬಿಡದೇ ನಗರಸಭೆ, ಪಂಚಾಯಿತಿ, ಸಹಕಾರ ಸಂಘಗಳ, ವಿಧಾನ ಪರಿಷತ್, ಪದವೀಧರ ಕ್ಷೇತ್ರ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪುಮುಖ ಪಾತ್ರವಹಿಸಿದ್ದಾರೆ. ಅಕಾಲಿಕ ಮಳೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ, ಕರೋನಾದಂತ ಮಹಾಮಾರಿಯಿಂದ ಜನತೆ ತತ್ತರಿಸಿದಾಗ ಅವರ ನೆರವಿಗೆ ಧಾವಿಸಿ, ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಫುಡ್ ಕಿಟ್ ವಿತರಿಸಿದ್ದಾರೆ.
ರೈತರು ಬೆಳೆದ ತರಕಾರಿಗಳನ್ನು ತಾವೇ ಹಣ ಕೊಟ್ಟು ಖರೀದಿಸಿ ಉಚಿತವಾಗಿ ಹಂಚಿಸಿದ್ದಲ್ಲದೆ ಕರೋನಕ್ಕೆ ತುತ್ತಾಗಿ ಔಷಧಿ ಹಣವಿಲ್ಲದ ಮನೆಯಿಂದ ಹೊರ ಬರಲು ಆಗದ ಪರಿತಪಿಸುತ್ತಿದ್ದ ಜನರಿಗೆ ಉಚಿತವಾಗಿ ಔಷಧಿಗಳನ್ನು, ಹಣ್ಣು-ಹಂಪಲು, ಸ್ಯಾನಿಟಜೈರ್ ಗಳನ್ನು ಮನೆಮನೆಗೆ ತಲುಪಿಸಿದ್ದಾರೆ. ಇಷ್ಟೇ ಅಲ್ಲದೇ ಎಲ್ಲಾ ಹಬ್ಬ ಹರಿದಿನ, ಸಾವು ನೋವುಗಳಲ್ಲಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಹಿರಿಯರು ಕಿರಿಯರೆಲ್ಲರಲ್ಲೂ ಹತ್ತಿರವಾಗಿದ್ದರೆ ಆದ್ದರಿಂದ ಹೈಕಮಾಂಡ್ ಸೂಕ್ತ ಅಭ್ಯರ್ಥಿ ಎಂದು ರವಿಕುಮಾರ್ ಅವರಿಗೆ ಟಿಕೆಟ್ ಘೋಷಿಸಿರುವುದು ಸರಿಯಾಗಿಯೇ ಇದೆ ಎಂದು ಹೇಳಿದರು.
ಮಂಡ್ಯ ನಗರಸಭೆಯ 35 ವಾರ್ಡ್ ಗಳ ಎಲ್ಲಾ ಮಾಜಿ, ಹಾಲಿ, ವಿಜೇತ ಮತ್ತು ಪರಾಜಿತ ಸದಸ್ಯರು, ಹೈಕಮಾಂಡ್ ಘೋಷಣೆ ಮಾಡಿರುವ ರವಿಕುಮಾರ್ ಅವರನ್ನು ಒಕ್ಕೊರಲಿನಿಂದ ಬೆಂಬಲಿಸುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲಗಳು ಭಿನ್ನಾಭಿಪ್ರಾಯಗಳು ಇಲ್ಲ, ನಾವು ಒಗಟ್ಟಿನಿಂದ ಕೆಲಸ ಮಾಡಿ ರವಿಕುಮಾರ್ ಪರವಾಗಿ ನಮ್ಮ 35 ವಾರ್ಡ್ ಗಳಲ್ಲಿ ಕೆಲಸ ಮಾಡಿ ರವಿಕುಮಾರ್ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸುವುದಾಗಿ ಪ್ರಮಾಣಿಸುತ್ತಿದ್ದೇವೆ ಎಂದರು.
ಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಶ್ರೀಧರ್, ನಹೀಂ, ಗೀತಾ, ಶುಭದಾಯಿನಿ, ಬಿ.ಟಿ.ಗುರುರಾಜ್, ಮುಖಂಡರಾದ ಚಂದ್ರು, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.