ಇಂದು ಶಿಕ್ಷಣಕ್ಕೆ ಹೆಚ್ಚಿನ ಮನ್ನಣೆ ದೊರೆಯುತ್ತಿದ್ದು, ಶಿಕ್ಷಕರಿಂದ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಬೇಕೆಂದು ಖ್ಯಾತ ಚಿತ್ರನಟ ದರ್ಶನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಭಾಗದ ಬೆಳಗೊಳ ಸರ್ಕಾರಿ ಶಾಲೆಗೆ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಅವರ ಎಂ.ಶಂಕರೇಗೌಡ ಟ್ರಸ್ಟ್ ವತಿಯಿಂದ ಅಗತ್ಯ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಇಂದು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿದವರನ್ನು ತಮ್ಮ ಜೀವನದ ಸ್ಫೂರ್ತಿಯಾಗಿ ಮಾಡಿಕೊಂಡು ಅಭ್ಯಾಸ ಮಾಡಿದರೆ, ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗಲಿದೆ. ಉನ್ನತ ಹುದ್ದೆ ಪಡೆದವರು,ಸಮಾಜದಲ್ಲಿ ಉತ್ತಮ ಸ್ಥಾನ ತಲುಪಿದವರು ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ತಮ್ಮಿಂದಾಗಬಹುದಾದ ಸಹಾಯವನ್ನು ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೀರ್ತಿ ತನ್ನಿ
ಪ್ರತಿಯೊಬ್ಬ ಪೋಷಕರು ನನ್ನ ಮಗ,ಮಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಅಂಕ ಗಳಿಸಿ ಉನ್ನತ ಸ್ಥಾನ ತಲುಪಲಿ ಎಂದು ಶಾಲೆಗೆ ಕಳುಹಿಸುತ್ತಾರೆ.ಅದರಂತೆ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ದಾಸರಾಗದೆ ಉತ್ತಮ ಶಿಕ್ಷಣ ಪಡೆದು ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರುವಂತೆ ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಲ್ಲಿ ಸಿಗುವ ಮೂಲಭೂತ ಸೌಕರ್ಯಗಳನ್ನು ಪಡೆದು ಚೆನ್ನಾಗಿ ಅಭ್ಯಾಸ ಮಾಡುವಂತೆ ತಿಳಿಸಿದರು.
ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ, ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಟ್ರಸ್ಟ್ ವತಿಯಿಂದ ಈಗಾಗಲೇ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇನೆ. ಅದರ ಭಾಗವಾಗಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಉತ್ತಮ ಶಿಕ್ಷಣಕ್ಕೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಕ್ಷೇತ್ರದ ಹಲವು ಶಾಲಾ-ಕಾಲೇಜುಗಳಿಗೆ ಅಗತ್ಯ ಪರಿಕರಕಗಳನ್ನು ನೀಡಲಾಗುತ್ತಿದೆ.ಇದನ್ನು ವಿದ್ಯಾರ್ಥಿಗಳು ಉಪಯೋಗಿಸಿಕಿಂಡು ಉನ್ನತ ಸ್ಥಾನ ಗಳಿಸಿಕೊಂಡು ತಂದೆ-ತಾಯಿಯರಿಗೆ,ಶಿಕ್ಷಕರಿಗೆ ಗೌರವ ತರಬೇಕೆಂದು ತಿಳಿಸಿದರು.
ಡಿ ಬಾಸ್ ಡಿ ಬಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು, ಗ್ರಾಮದ ಯುವಕರು,ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಕೂಗಿ ಅಭಿಮಾನ ಮೆರೆದರು.ಎಲ್ಲೆಡೆ ಡಿ ಬಾಸ್ ಡಿ ಬಾಸ್ ಎಂಬ ಕೂಗು ಮಾರ್ದನಿಸಿತು.
ಅದ್ದೂರಿ ಸ್ವಾಗತ
ಕೆಆರ್ಎಸ್ ಗೆ ಆಗಮಿಸಿದ ದರ್ಶನ್ ಗೆ ಅಭಿಮಾನಿಗಳು ಕ್ರೇನ್ ಮೂಲಕ ಭಾರೀ ಗಾತ್ರದ ಕಬ್ಬಿನ ಹಾರವನ್ನು ಹಾಕಿ ಅದ್ದೂರಿ ಸ್ವಾಗತ ಕೋರಿದರು. ಜೆಸಿಬಿಯಲ್ಲಿ ನಿಂತು ಪುಷ್ಪಾರ್ಚನೆ ಮಾಡಿ ತಮ್ಮ ನೆಚ್ಚಿನ ನಟನಿಗೆ ಜೈ ಕಾರ ಕೂಗಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಡಿ ಬಾಸ್ ಡಿ ಬಾಸ್ ಎಂಬ ಜೈಕಾರದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಹುಲಿಕೆರೆ, ಬೆಳಗೊಳ, ಪಾಲಹಳ್ಳಿ, ನಗುವನಹಳ್ಳಿ, ಮೇಳಾಪುರ, ಮಹದೇವಪುರ, ಚಿಕ್ಕಂಕನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಅಗತ್ಯ ಪರಿಕರಕಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಕೂಗಿ ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಕೆಲ ಜೆಡಿಎಸ್, ಕಾಂಗ್ರೆಸ್ ಮುಖಂಡರು ಸಚ್ಚಿದಾನಂದರನ್ನು ಬೆಂಬಲಿಸುವ ಮೂಲಕ ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎಲ್.ಲಿಂಗರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ಯುವ ಮುಖಂಡ ದರ್ಶನ್ ಲಿಂಗರಾಜು, ಕೆಆರ್ಎಸ್ ರಾಮೇಗೌಡ, ಪ್ರಕಾಶ್, ಎಂ,ಜೆ.ಪುಟ್ಟರಾಜು, ಪುರಸಭೆ ಮಾಜಿ ಸದಸ್ಯ ಈ.ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.