ಮಂಡ್ಯ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ಧ ಹೋಬಳಿಯ ಬೇವುಕಲ್ಲು ಮತ್ತು ಗ್ರಾಮ ಪಂಚಾಯಿತಿಗೆ ಸೇರಿರುವ 2023-24 ನೇ ಸಾಲಿನ ಜನಜೀವನ್ ಮಿಷನ್ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ157 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಮತ್ತು ನಲ್ಲಿ ಸಂಪರ್ಕ ಕಾಮಗಾರಿಗೆ ಛತ್ರನಹಳ್ಳಿ ಗ್ರಾಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ ನೆರವೇರಿಸಿದರು.
ಬೇವುಕಲ್ಲು ಗ್ರಾಮ ಪಂಚಾಯಿತಿಗೆ ಸೇರಿರುವ ಛತ್ರನಹಳ್ಳಿ, ಮಲ್ಲೇನಹಳ್ಳಿ,ಬಿಲ್ಲೇನಹಳ್ಳಿ,
ಮಾಡ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಮತ್ತು ನಲ್ಲಿ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೆ ಕುಡಿಯುವ ನೀರು ಬರುವ ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳಲ್ಲೂ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಬೆಂಗಳೂರಲ್ಲಿ ಸಭೆ
ಕಾವೇರಿ ವಿಚಾರದ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಅರ್ಜಿ ವಿಚಾರಣೆ ಸೆಪ್ಟಂಬರ್ 21ಕ್ಕೆ ಮುಂದೂಡಲಾಗಿದೆ.ಈ ಸಂಬಂಧ ಬೆಂಗಳೂರಿನಲ್ಲಿ ಉಪಮುಖ್ಯ ಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಮಾತನಾಡಿ, ಮುಂದಿನ ನಡವಳಿ ಬಗ್ಗೆ ವಾಸ್ತವಾಂಶ ತಿಳಿಸಲು ಬೆಂಗಳೂರಲ್ಲಿ ಸಭೆ ಕರೆಯಲಾಗಿದೆ ಎಂದರು.
ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ದಿಂದ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ. ಸೆಪ್ಟೆಂಬರ್ 11ರಂದು ಸೋಮವಾರ ಬೃಹತ್ ರಸ್ತೆ ತಡೆ ಚಳುವಳಿ ನಡೆಯಲಿದೆ ಎಂದು ಹೇಳಿದರು. ಸೆಪ್ಟೆಂಬರ್ 12ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ದೆಹಲಿಯಲ್ಲಿ ಸಭೆ ಮಾಡುತ್ತಿದ್ದಾರೆ ಅದಕ್ಕಿಂತ ಮುಂಚಿತವಾಗಿ ಸರ್ಕಾರದ ಮೂಲಕ ಒತ್ತಾಯ ಮಾಡಬೇಕು ಅದರ ಬಗ್ಗೆ ಪ್ರಯತ್ನ ಪಡುತ್ತೇವೆ ಎಂದರು.
ಕೊಳ ಅಭಿವೃದ್ಧಿಗೆ ಚಾಲನೆ
ಮಂಡ್ಯ ತಾಲೂಕಿನ ಬೇವುಕಲ್ಲು ಗ್ರಾಮದಲ್ಲಿ ನರೇಗಾ ಯೋಜನೆಯಡಿ 7.50 ಲಕ್ಷ ರೂ ವೆಚ್ಚದಲ್ಲಿ ಕಲಗಾರಲಿಂಗೇಶ್ವರ ಕೊಳ ಅಭಿವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ, ಸದಸ್ಯರಾದ ಸುಮಾ, ಸಂಗೀತ, ದಕ್ಷಿಣ ಮೂರ್ತಿ,ಶಿವಕುಮಾರ್, ಶಿವಲಿಂಗಯ್ಯ,ಲತಾ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾಂತಮಣಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೀರಪ್ಪ,ಮಾಜಿ ಸದಸ್ಯ ಪುಟ್ಟರಾಜು, ಎಇಇ ನಾಗರಾಜು, ಮುಖಂಡರಾದ ಹಟ್ನ ರಮೇಶ್, ಶಿವಳ್ಳಿ ಚಂದ್ರು, ರಾಘವೇಂದ್ರ, ಹುಳ್ಳೇನಹಳ್ಳಿ ಸುಚೇಂದ್ರ ಸೇರಿದಂತೆ ಇತರರು ಹಾಜರಿದ್ದರು