ಮಕ್ಕಳಿಗೆ ಇಷ್ಟವಾಗುವ ವಸ್ತುಗಳ ಮೂಲಕ ದಸರಾ ವೈಭವದ ಅರಿವು ಮೂಡಿಸುವ ಕೆಲಸ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶೈಕ್ಷಣಿಕ ಸಲಹೆಗಾರ ಯೋಗೇಶ್ ಹೇಳಿದರು.
ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿಯ ಬೇವಿನಹಳ್ಳಿ ಗ್ರಾಮದಲ್ಲಿರುವ ಗ್ರೀನ್ ವ್ಯಾಲಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿರುವ ಸಾಂಪ್ರದಾಯಿಕ ದಸರಾ ಬೊಂಬೆಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಬೊಂಬೆಗಳ ಮೂಲಕ ದಸಾರ ವೈಭವವನ್ನು ತಿಳಿಸಿಕೊಡುತ್ತಿರುವುದು ಶ್ಲಾಘನೀಯ, ಮಂಡ್ಯ ಜಿಲ್ಲೆಯಲ್ಲಿ ಯಾವ ಶಾಲೆಗಳಲ್ಲೂ ದಸರಾ ಬೊಂಬೆ ಪ್ರದರ್ಶನ ಮಾಡುವುದಿಲ್ಲ, ಇಲ್ಲಿನ ಮಕ್ಕಳಿಗೆ ಈ ಸೌಭಾಗ್ಯ ಲಭಿಸಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಸರಾ ಬೊಂಬೆಗಳನ್ನು ವೀಕ್ಷಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷೆ ಸರಸ್ವತಿ ಎಂ.ಗೌಡ, ಕಾರ್ಯದರ್ಶಿ ಎಚ್.ಎಂ.ಹರೀಶ್ , ಟ್ರಸ್ಟಿಗಳಾದ ಎಂ.ಟಿ.ವಸಂತ್, ಶಂಕರೇಗೌಡ, ಪ್ರಸಾದ್, ಮನು ಮತ್ತಿತರರಿದ್ದರು.