ಕ್ರೈಸ್ತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ನಿರ್ದೇಶಕರ ಸ್ಥಾನಕ್ಕೆ ಕರ್ನಾಟಕ ಮೂಲದ ಕ್ರೈಸ್ತ ಸಮುದಾಯದ ಕನ್ನಡಿಗರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಕದಂಬ ಸೈನ್ಯವು ಶುಕ್ರವಾರ ಮನವಿ ಸಲ್ಲಿಸಿದೆ.
ಕರ್ನಾಟಕದಲ್ಲಿ ನೆಲೆಸಿರುವ ಕ್ರೈಸ್ತ ಸಮುದಾಯದ ಹೊರ ರಾಜ್ಯದ ಭಾಷಿಕರನ್ನ ನೇಮಕ ಮಾಡದೆ, ಸ್ಥಳೀಯ ಕನ್ನಡಿಗರನ್ನು ನಿಗಮಕ್ಕೆ ನೇಮಕಾತಿ ಮಾಡಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಕ್ರೈಸ್ತ ಧರ್ಮಾಧ್ಯಕ್ಷ ಬರ್ನಾದ್ ಮೋರಿಸ್ ರಾಜ್ಯದ ಚರ್ಚ್ ಗಳಲ್ಲಿ ಆಯಾ ಭಾಷಿಗರು ಅವರವರ ಭಾಷೆಯಲ್ಲಿ ಪ್ರಾರ್ಥನೆ ಮಾಡಬಹುದಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದಾಗ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಮುಖಂಡರು ಕನ್ನಡ ವಿರೋಧಿ ಸುತ್ತೋಲೆ ವಿರುದ್ಧ ಹೋರಾಟ ಮಾಡಿದ್ದರು, ಅದರ ಫಲವಾಗಿ ಕನ್ನಡಿಗ ಕ್ರೈಸ್ತರು ಎಲ್ಲಾ ಚರ್ಚುಗಳಲ್ಲಿ ಕನ್ನಡದಲ್ಲೇ ಪ್ರಾರ್ಥನೆ ಮಾಡುವ ಒಮ್ಮತದ ತೀರ್ಮಾನ ಮಾಡಿದ್ದರು.
ಕನ್ನಡಿಗ ಕ್ರೈಸ್ತರಿಗೆ ರಾಜಕಾರಣದಲ್ಲಿ ನಿರಂತರ ಅನ್ಯಾಯವಾಗುತ್ತಿದೆ, ಹೊರ ರಾಜ್ಯದವರಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ, ಕಾಂಗ್ರೆಸ್ ಸರ್ಕಾರ ಮೂಲ ಕನ್ನಡಿಗ ಕ್ರೈಸ್ತರಿಗೆ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಕದಂಬ ಸೈನ್ಯದ ರಾಜ್ಯದ್ಯಕ್ಷ ಬೇಕರಿ ರಮೇಶ್, ಉಮ್ಮಡಹಳ್ಳಿ ನಾಗೇಶ್, ಬಿ. ಶಿವಕುಮಾರ್, ಆರಾಧ್ಯ ಗುಡುಗೆನಹಳ್ಳಿ, ರಾಮು. ಕ್ರೈಸ್ತ ಮುಖಂಡ ಥಾಮಸ್ ಬೆಂಜಮಿನ್,ಭಗವಾನ್, ರಾಮಣ್ಣ, ಪುಟ್ಟರಾಜು ಮತ್ತಿತರಿದ್ದರು.