ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿ ಅತ್ಯಾಚಾರ ನಡೆಸಿರುವುದು ರಾಕ್ಷಸಿ ಕೃತ್ಯ, ಇಂತಹ ಕೃತ್ಯವನ್ನು ತಡೆಯದ ದೇಶದ ಪ್ರಧಾನಿ ನರೆಂದ್ರ ಮೋದಿ , ಗೃಹಮಂತ್ರಿ ಅಮಿತ್ ಶಾ ಮತ್ತು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ದುರ್ಬಲ ನಾಯಕರು ಎಂದು ಜನವಾದಿ ಮಹಿಳಾ ಸಂಘಟನೆಯ ಮಳವಳ್ಳಿ ತಾಲೂಕು ಅಧ್ಯಕ್ಷೆ ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಅನಂತರಾಮ್ ಸರ್ಕಲ್ ನಲ್ಲಿ ಜನವಾದಿ ಮಹಿಳಾ ಸಂಘಟನೆ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಕೃಷಿ ಕೂಲಿಕಾರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 79 ದಿನಗಳಿಂದ ಅಲ್ಪಸಂಖ್ಯಾತ ಕುಕಿ ಜನಾಂಗದ ಮೇಲೆ ಬಹು ಸಂಖ್ಯಾತ ಮೈಥಾಯಿ ಜನಾಂಗದವರು ದೌರ್ಜನ್ಯ ನಡೆಸುತ್ತಿದ್ದಾರೆ. ಈ ಗಲಭೆ, ದೊಂಬಿ, ಅತ್ಯಾಚಾರ, ಲೂಟಿ ಪ್ರಕರಣದ ಬಗ್ಗೆ ನರೇಂದ್ರ ಮೋದಿಯವರು ಮಾತನಾಡದಿರುವುದು ಈ ದೇಶದ ದುರಂತವಾಗಿದೆ ಎಂದು ಕಿಡಿಕಾರಿದರು.
ಈ ದೇಶದ ಗೃಹಮಂತ್ರಿ ಈ ಒಂದು ಗಲಭೆಯನ್ನು ತಡೆಗಟ್ಟಲು ವಿಫಲರಾಗಿದ್ದಾರೆ, ಇಂತಹ ಅಸಮರ್ಥರು ಈ ದೇಶದ ಪ್ರಧಾನಿಯಾಗಿರುವುದು ಈ ದೇಶದ ದೌರ್ಭಾಗ್ಯ, ಡಬ್ಬಲ್ ಇಂಜಿನ್ ಸರ್ಕಾರ ಬೇಕೆಂದು ಬಯಸುವ ಮಣಿಪುರದ ಬಿರೇನ್ ಸಿಂಗ್ ಸರ್ಕಾರ, ಅಶಾಂತಿಯನ್ನು ತಡೆಗಟ್ಟಲು ವಿಫಲರಾಗಿರುವ ಕಾರಣದಿಂದ ರಾಜೀನಾಮೆಯನ್ನು ಕೊಡಬೇಕು. ಈ ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಕಲ್ಪಿಸಬೇಕು.ಮಹಿಳೆಯರನ್ನು ಬೆತ್ತಲೆ ಮಾಡಿ ಬಹಿರಂಗವಾಗಿ ಅತ್ಯಾಚಾರ ನಡೆಸಿರುವ ಇಂಥ ನರ ರಾಕ್ಷಸರನ್ನ ಉಗ್ರ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್ ಎಲ್ ಭರತ್ ರಾಜ್, ಸಿಪಿಎಂ ಮುಖಂಡ ಕೃಷ್ಣೇಗೌಡ, ಕೂಲಿಕಾರ ಸಂಘದ ಮುಖಂಡರಾದ ಶಿವಮಲ್ಲಯ್ಯ, ಆನಂದ್. ಜನವಾದಿ ಮಹಿಳಾ ಸಂಘಟನೆಯ ಅನಿತಾ, ಸುನಂದ, ಜಯಶೀಲ ಮುಂತಾದವರು ಭಾಗವಹಿಸಿದ್ದರು.