ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಪ್ರಬಲವಾಗುವಂತೆ ಮಾಡಿದರೆ ಸಚಿವ ಸ್ಥಾನ ಕೊಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಕಡೆಯಿಂದ ಆಫರ್ ಬಂದಿತ್ತು ಎಂದು ಬಿಜೆಪಿ ಮುಖಂಡ,ವಕೀಲ ದೇವರಾಜೇಗೌಡ ಗಂಭೀರವಾಗಿ ಅರೋಪಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುಗಿದ ಮೇಲೆ ನನಗೆ ಕ್ಯಾಬಿನೇಟ್ ಸಚಿವ ಸ್ಥಾನದ ಆಫರ್ ಕೊಟ್ಟಿದ್ದಾರೆ. ಈ ಆಫರ್ ಕೊಟ್ಟಿದ್ದು ಮತ್ಯಾರೂ ಅಲ್ಲ, ಸ್ವತಃ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್.ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಮೂಲಕ ಈ ಆಫರ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ನಾಳೆ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು, ಪೆನ್ ಡ್ರೈವ್ ಪ್ರಕರಣದಿಂದ ಬಿಜೆಪಿಗೆ ಆಗಲಿರುವ ಡ್ಯಾಮೇಜ್ ತಡೆಯಲು ದೇವರಾಜೇಗೌಡ ಮುಂದಾಗಿದ್ದಾರೆ.
ಪ್ರಕರಣದ ಹಿಂದೆ ಡಿ.ಕೆ. ಶಿವಕುಮಾರ್ ಆಫರ್ ಕೊಟ್ಟರು ಎನ್ನಲಾದ ಅರ್ಧಂಬರ್ಧ ಆಡಿಯೋ ಪ್ಲೇ ಮಾಡಿದ್ದು, ಫುಲ್ ಆಡಿಯೋ ಪ್ಲೇ ಮಾಡಲು ಆಗಲ್ಲ ಎಂದು ತಿಳಿಸಿದ್ದಾರೆ. ಪ್ಲೇ ಮಾಡಿದ ಆಡಿಯೋದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ‘ಹೇಳ್ರಿ ಏನು ವಿಚಾರ’ ಎನ್ನುವ ಮಾತಷ್ಟನ್ನೇ ಕೇಳಿಸಿದ್ದಾರೆ.
ಎಸ್ಐಟಿ ಬಗ್ಗೆ ಆರೋಪ
ಸುದ್ದಿಗೋಷ್ಠಿಯಲ್ಲಿ ಎಸ್ಐಟಿ ಅಧಿಕಾರಿ ಸುಮನ್ ಪೆನ್ನೇಕಾರ್ ಫೋಟೋ ತೋರಿಸಿದ ವಕೀಲ ದೇವರಾಜೇಗೌಡ, ಇವರು ನನ್ನ ಹೇಳಿಕೆಯಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ತೆಗೆಯಲು ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಇಡೀ ಪ್ರಕರಣ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ನಡೆದಿದೆ. ನಿಜವಾದ ಆರೋಪಿಗಳನ್ನು ಕಾಂಗ್ರೆಸ್ ಬಚ್ಚಿಟ್ಟುಕೊಂಡಿದೆ. ಸಂತ್ರಸ್ತ ಮಹಿಳೆಯರನ್ನು ಕರ್ಕೊಂಡು ಬಂದು ಫೀಡ್ ಮಾಡಲಾಗುತ್ತಿದೆ. ಸಂತ್ರಸ್ತರಿಗೆ ಹಣ ಕೊಟ್ಟು ಇವರು ಕರ್ಕೊಂಡು ಬಂದಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರ ನನ್ನನ್ನು ಸಿಕ್ಕಿಸೋಕೆ ಹೊರಟಿದೆ. ಎಲ್.ಆರ್.ಶಿವರಾಮೇಗೌಡರನ್ನು ಮಧ್ಯವರ್ತಿಯಾಗಿ ಕಳುಹಿಸಲಾಗಿದೆ. ಮಹಾನಾಯಕ ಶಿವರಾಮೇಗೌಡರನ್ನು ಏಜೆಂಟ್ರನ್ನಾಗಿ ನಮ್ಮ ಹಿಂದೆ ಬಿಟ್ಟಿದ್ದಾರೆ. ನಾನು ಸಿಬಿಐಗೆ ಎಲ್ಲಾ ದಾಖಲೆ ಕೊಡುತ್ತೇನೆ ಎಂದರು.
ಮಿಕ್ಸಿಂಗ್ ವಿಡಿಯೋಗಳು
ಪೆನ್ ಡ್ರೈವ್ ನಲ್ಲಿರುವ ಸದ್ಯ ವೈರಲ್ ಆಗಿರುವ ವಿಡಿಯೋಗಳು ನನ್ನ ಪೆನ್ ಡ್ರೈವ್ನಲ್ಲಿ ಇರೋದಲ್ಲ. ಈಗ ಹೊರ ಬಂದಿರುವ ವಿಡಿಯೋಗೂ ನನಗೂ ಸಂಬಂಧ ಇಲ್ಲ. 2 ಗಂಟೆ 37 ನಿಮಿಷಗಳ ವಿಡಿಯೋ ಇದೆ. ಈಗ ವೈರಲ್ ಆಗಿರುವ ವೀಡಿಯೋಗಳೆಲ್ಲವೂ ಮಿಕ್ಸಿಂಗ್ ವಿಡಿಯೋಗಳು. ಇದು ಸಂಪೂರ್ಣವಾಗಿ ಆರೋಪಿಗೆ ಸಂಬಂಧಿಸಿದ್ದಲ್ಲ. ಅಸಲಿಗೆ ಇರೋದು 2 ಗಂಟೆ 37 ನಿಮಿಷ ವೀಡಿಯೋ ಮಾತ್ರ ಎಂದರು.
ಮೋದಿ ವರ್ಚಸ್ಸಿಗೆ ಧಕ್ಕೆಯ ಗುರಿ?
ಬಿಜೆಪಿ, ಜೆಡಿಎಸ್ ಮೈತ್ರಿಗೆ ಧಕ್ಕೆಯಾಗಬೇಕು ಎನ್ನುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ನಿಷ್ಪಕ್ಷಪಾತ ತನಿಖೆಯಾಗ ಬೇಕು ಎಂದರೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಎಸ್ಐಟಿ ಅಧಿಕಾರಿಗಳು ಕೈಗೊಂಬೆಗಳ ರೀತಿಯಲ್ಲಿ ತನಿಖೆ ಮಾಡ್ತಿದ್ದಾರೆ. ಈ ಪ್ರಕರಣದಿಂದ ಮೋದಿಯವರಿಗೆ ಧಕ್ಕೆ ಮಾಡಲು ಹೊರಟಿದ್ದಾರೆ ಎಂದರು.