ಕರ್ನಾಟಕ ಶ್ರಮಿಕ ಶಕ್ತಿ (KSS) ಮತ್ತು ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಆನ್ ಲೋಡಿಂಗ್ ಒಕ್ಕೂಟದ ವತಿಯಿಂದ ಅನ್ನಭಾಗ್ಯ ಹಮಾಲಿ ಕಾರ್ಮಿಕರ ಕೂಲಿ ಹೆಚ್ಚಳ, ಕೆಲಸದ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ನೇರ ಸಂಬಳ ಪಾವತಿಗೆ ಒತ್ತಾಯಿಸಿ ಫೆ.15ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟಾವದಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ವರದರಾಜೇಂದ್ರ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ಗ್ರಾಮಾಂತರ ಸಾಗಾಣಿಕೆ ಆಹಾರ ಧಾನ್ಯಗಳ ಗೋದಾಮಿನ ಲಾಟ್ನಿಂದ ಸೈಲ್ಗೆ, ಸ್ಟೇಲ್ ನಿಂದ ಲಾರಿಗೆ ಲಾರಿಯಿಂದ ನ್ಯಾಯಬೆಲೆ ಅಂಗಡಿಗೆ ಹೋಗಿ ಅನ್ ಲೋಡಿಂಗ್ ಮಾಡುವ ಮೂರು ಕೆಲಸಕ್ಕೆ ಕ್ವಿಂಟಾಲ್ ಗೆ ಕನಿಷ್ಟ 36 ರೂ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ಅನ್ನಭಾಗ್ಯ ಹಮಾಲಿ ಕಾರ್ಮಿಕರಿಗೆ ಆಹಾರ ಇಲಾಖೆಯಿಂದಲೇ ನೇರವಾಗಿ ಸಂಬಳ ಪಾವತಿಯಾಗುವಂತೆ(DPS) ಕಾರ್ಮಿಕರನ್ನು ನೇರವಾದ ವ್ಯವಸ್ಥೆಯ ಅಡಿಯಲ್ಲಿ ತರಬೇಕು. ಸಾರ್ವತ್ರಿಕ ರಜಾ ದಿನ, ರಾಷ್ಟ್ರೀಯ ಹಬ್ಬ, ನಾಡಿನ ಹಬ್ಬಗಳ ದಿನಗಳಲ್ಲಿ ಕೆಲಸ ಮಾಡಿದವ ಹೆಚ್ಚುವರಿ ಕೆಲಸಕ್ಕೆ ಹೆಚ್ಚವರಿ ವೇತನ ನೀಡಬೇಕು. ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಿ ಕ್ರಮವಹಿಸಲು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ತುಟ್ಟಿಭತ್ಯೆಗೆ ಅನುಗುಣವಾಗಿ ಪ್ರತಿವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಪ್ರತಿವರ್ಷ ಕೂಲಿದರ ಹೆಚ್ಚಿಸಬೇಕು. ಗುತ್ತಿಗೆದಾರರ ಪಾಲಿನ ಇ.ಎಸ್.ಐ ಮತ್ತು ಪಿ.ಎಫ್ ವಂತಿಗೆಯನ್ನು ಗುತ್ತಿಗೆದಾರರು ಪಾವತಿಸಲು ಸೂಕ್ತಕ್ರಮ ವಹಿಸಬೇಕು. ಕಳೆದ 30-40 ವರ್ಷಗಳಿಂದ ಸರ್ಕಾರದ ಯೋಜನೆ ಜಾರಿಯಲ್ಲಿ ಕೆಲಸ ಮಾಡುತ್ತಿರುವ ಪಡಿತರ ಅನ್ನಭಾಗ್ಯ ಯೋಜನೆಯ ಹಮಾಲಿ ಕಾರ್ಮಿಕರಿಗೆ ಗ್ರಾಚ್ಯುಟಿ ಪಾವತಿಸಲು ಕ್ರಮ ವಹಿಸಬೇಕು ಹಾಗೂ ಆಹಾರ ಇಲಾಖೆಯಿಂದಲೇ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಕೆ.ದೇವರಾಜು, ಮಹೇಶ್, ಕೃಷ್ಣ, ವೈಮನ, ಕೃಷ್ಣ ಉಪಸ್ಥಿತರಿದ್ದರು.