Wednesday, May 22, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಸಭೆ ಚುನಾವಣೆ| ಜೆಡಿಎಸ್ ಪಕ್ಷವನ್ನು ಕೈಬಿಟ್ಟ ಬಿಜೆಪಿ : ಡಿಕೆ ಶಿವಕುಮಾರ್

“ಬಿಜೆಪಿ ಹಾಗೂ ಜೆಡಿಎಸ್ ನವರು ಆತ್ಮಸಾಕ್ಷಿ ಮತಗಳನ್ನು ಕೇಳುತ್ತಿದ್ದರು. ಬಿಜೆಪಿಯವರೇ ಆತ್ಮಸಾಕ್ಷಿ ಮತ ಕೊಟ್ಟಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.

ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಬಿಜೆಪಿಯವರು ತಮ್ಮ ಅಭ್ಯರ್ಥಿ ಗೆಲುವಿಗೆ ಬೇಕಾದ 45 ಮತಗಳನ್ನು ಇಟ್ಟುಕೊಂಡು ಉಳಿದ ಮತಗಳನ್ನು ಜೆಡಿಎಸ್ ಪಕ್ಷಕ್ಕೆ ನೀಡಬಹುದಿತ್ತು. ಮೈತ್ರಿ ಅಭ್ಯರ್ಥಿಯನ್ನು ನಿಲ್ಲಿಸಿದ್ದೇ ಬಿಜೆಪಿ ಬೆಂಬಲದೊಂದಿಗೆ ಅಲ್ಲವೇ? ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಲ್ಲವೇ? ಆದರೆ ಬಿಜೆಪಿ ತಮ್ಮ ಪಕ್ಷಕ್ಕೆ 48 ಮತಗಳನ್ನು ತೆಗೆದುಕೊಂಡು, ಜೆಡಿಎಸ್ ಅನ್ನು ಕೈಬಿಟ್ಟಿದ್ದಾರೆ” ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.

ಸೋಮಶೇಖರ್ ಅವರು ಅಡ್ಡಮತದಾನ ಮಾಡಿರುವ ಬಗ್ಗೆ ಕೇಳಿದಾಗ, “ಅಡ್ಡಮತದಾನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ನನ್ನ ಮತವನ್ನಷ್ಟೇ ನೋಡಿದ್ದೇನೆ. ಪಕ್ಷೇತರರ ಮತವನ್ನು ನಾನು ನೋಡಿಲ್ಲ. ಹೀಗಿರುವಾಗ ಅಡ್ಡ ಮತದಾನದ ಬಗ್ಗೆ ನನಗೇನು ಗೊತ್ತು? ಬಿಜೆಪಿಯವರನ್ನೇ ಕೇಳಿ. ಅವರೇ ಅಲ್ಲವೇ ಆತ್ಮಸಾಕ್ಷಿ ಮತ ಕೇಳಿದ್ದು” ಎಂದು ತಿಳಿಸಿದರು.

ನಿಮ್ಮ ಪಕ್ಷಕ್ಕೆ ಆತ್ಮಸಾಕ್ಷಿ ಮತ ಬಂದಿದ್ದರೆ ಆ ಶಾಸಕರಿಗೆ ಕಾನೂನಾತ್ಮಕವಾಗಿ ಎದುರಾಗುವ ಸಮಸ್ಯೆಗೆ ರಕ್ಷಣೆ ಇರುತ್ತದೆಯೇ ಎಂದು ಕೇಳಿದಾಗ, “ಸಮಯ ಬರಲಿ, ಮಾತನಾಡೋಣ. ಈಗಲೇ ಎಲ್ಲವೂ ಬೇಡ. ಅಡ್ಡ ಮತದಾನದ ಬಗ್ಗೆ ಸ್ಪೀಕರ್ ಗೆ ದೂರಿನ ವಿಚಾರವೂ ನನಗೆ ಗೊತ್ತಿಲ್ಲ. ಸೋಮಶೇಖರ್ ಅವರು ಅವರ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿದ್ದಾರೆ. ಈ ಚುನಾವಣೆ ಮೈತ್ರಿ ಸರಿಯೋ? ಸರಿಯಲ್ಲವೋ? ಎಂಬ ವಿಚಾರಕ್ಕೆ ಸಂಬಂಧಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಮತದಾರರು, ಶಾಸಕರು, ಪದವೀಧರರು, ಶಿಕ್ಷಕರು ಒಪ್ಪಬೇಕು. ಶಿಕ್ಷಕರು ಈಗಾಗಲೇ ತಿರಸ್ಕರಿಸಿದ್ದು, ಶಾಸಕರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ನೋಡೋಣ” ಎಂದರು.

ಸೋಲು ಗೆಲುವು ಮುಖ್ಯವಲ್ಲ, ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಸಂಖ್ಯಾಬಲ ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ ಏನಾಗುತ್ತಿತ್ತು ಅಂತಾ ನಮಗೆ ಗೊತ್ತಿದೆ. ನಾವಾಗಿರುವುದಕ್ಕೆ ಸುಮ್ಮನಿದ್ದೇವೆ. ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!