Tuesday, April 30, 2024

ಪ್ರಾಯೋಗಿಕ ಆವೃತ್ತಿ

ಧರ್ಮದ ಬೇರುಗಳಲ್ಲಿ ಹೆಣ್ಣಿನ ಶೋಷಣೆಯ ಮೂಲ ನೆಲೆಗಳಿವೆ: ಸವಿತಾ ಪ. ಮಲ್ಲೇಶ್

ಮಣಿಪುರದ ಘಟನೆ ಅತ್ಯಂತ ಸಂಕಟವನ್ನು ತರಿಸುತ್ತದೆ. ದ್ವೇಷ ಸಾಧಿಸಲು ಹೆಣ್ಣಿನ ಮೇಲೆ ಅತ್ಯಾಚಾರ ಎಸಗುವುದು ದುರಂತ. ಇವತ್ತು ಮಠಗಳೇ ಹೆಣ್ಣಿನ ಶೋಷಣೆ ಮಾಡಿರುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಧರ್ಮದ ಬೇರುಗಳಲ್ಲಿ ಹೆಣ್ಣಿನ ಶೋಷಣೆಯ ಮೂಲ ನೆಲೆಗಳಿವೆ ಎಂದು ಚಿಂತಕರಾದ ಸವಿತಾ ಪ. ಮಲ್ಲೇಶ್ ಅಭಿಪ್ರಾಯಪಟ್ಟರು.

ಮಂಡ್ಯದ ಕರ್ನಾಟಕ ಸಂಘ ಹಾಗೂ ಅದರ ಮಹಿಳಾ ಘಟಕದ ಸಂಯುಕ್ತ ಆಶ್ರಯದಲ್ಲಿ ಕೆ ವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಮಹಿಳಾ ದಿನಾಚರಣೆ- 2024ರ ಕಾರ್ಯಕ್ರಮ ಉದ್ಘಾಟಿಸಿ,  “ವರ್ತಮಾನದ ಮಹಿಳೆ: ಅವಕಾಶಗಳು ಮತ್ತು ಸವಾಲುಗಳು”ಎಂಬ ವಿಷಯ ಕುರಿತು ಮಾತನಾಡಿದರು.

ನಮಗೆ ಅವಕಾಶಗಳು ಏನಿದೆ? ಸಮ ಸಮಾಜದ ಸೃಷ್ಟಿಯಾಗಬೇಕಾದರೆ ಹೆಣ್ಣು ಎಲ್ಲ ರೀತಿಯಿಂದಲೂ ಸದೃಢ ಆಗಬೇಕು. ಅದು ಹೇಗೆ ಸಾಧ್ಯ? ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯದ ಅವಶ್ಯಕತೆ ಇದೆ. ಮಹಿಳೆ ಆರ್ಥಿಕ ಸ್ವಾತಂತ್ರ್ಯ ಸಾಧಿಸುತ್ತಿದ್ದರು, ಸಾಮಾಜಿಕ ಸ್ವಾತಂತ್ರ್ಯದ ಅಗತ್ಯವಿದೆ. ಆರ್ಥಿಕವಾಗಿ , ಕೌಟುಂಬಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಯಾವಾಗ ಹೆಣ್ಣು ಸಬಲಳಾಗುತ್ತಾಳೋ ಆಗ ಅವಳು ಪೂರ್ಣ ಸ್ವಾತಂತ್ರ್ಯ ಆಗುತ್ತಾಳೆ ಎಂದರು.

ದೇಶ ಸ್ವಾತಂತ್ರ್ಯಗೊಂಡ ನಂತರದ ದಿನದಿಂದಲೂ ಹೆಣ್ಣನ್ನು ಬಲಗೊಳಿಸುವುದಕ್ಕೆ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಈ ಯೋಜನೆಗಳ ಬಗ್ಗೆ ನಮಗೆ ಮೊದಲು ಅರಿವು ಇರಬೇಕು. ಕುಟುಂಬದಲ್ಲಿ ಹೆಣ್ಣಿಗೆ ಯಾವ ರೀತಿಯ ಸಮಾನತೆ ಇದೆ? ಎಂಬುದನ್ನು ನಾವು ತಿಳಿಯಬೇಕು. ಹೆಣ್ಣಿಗೆ ಸಂಕೋಲೆಯನ್ನು ಹಾಕಿದವರು ಯಾರು? ಕೌಟುಂಬಿಕ ಕೆಲಸಗಳಿಗೆ ಮಾತ್ರವೇ ಮಹಿಳೆಯರನ್ನು ತಯಾರಿ ಮಾಡುತ್ತಾರೆ. ಇದನ್ನು ಬದಲಾಯಿಸುವ ಮನಸ್ಸು ನಮ್ಮದಾಗಬೇಕು. ಮನಸು ಬದಲಾವಣೆ ಆಗಲಿಲ್ಲವೆಂದರೆ ನಮ್ಮ ಮಾತು ವ್ಯರ್ಥವೆಂದರು.

ನನ್ನ ತಂದೆ, ಯಾವತ್ತು ಹೆಣ್ಣು ಗಂಡು ಎಂಬ ತಾರತಮ್ಯ ಭಾವವನ್ನು ಮಾಡಿಲ್ಲ ಸಮಾನವಾಗಿ ನಮ್ಮನ್ನು ಬೆಳೆಸಿದರು. ಮನೆಯಲ್ಲೇ ತಾರತಮ್ಯವಿರುವಾಗ ಹೆಣ್ಣಿಗೆ ಹೇಗೆ ಗೌರವ ತೋರಿಸುತ್ತಾರೆ? ‘ಹೆಣ್ಣು ದೇವತೆ’ಎಂದು ಹೊಗಳುವುದು ಬೇಡ. ಧಾರಾವಾಹಿಗಳು ಕೂಡ ಹೆಣ್ಣು ಬದುಕನ್ನು ಪುರುಷನಿಗೆ ಅಡಿಯಾಳಾಗಿ ಇರುವುದನ್ನೇ ಬಿಂಬಿಸಿವೆ. ಅವಕಾಶ ಏನಿದೆ ಹೆಣ್ಣಿಗೆ? ಸ್ವಾತಂತ್ರ್ಯ ಪೂರ್ವದಿಂದಲೂ ಹೆಣ್ಣು ಯುದ್ಧಭೂಮಿಯನ್ನು ಬಿಟ್ಟಿಲ್ಲ ಹೊನಕೆ ಓಬವ್ವ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಅಹಲ್ಯಾ ಓಳ್ಕರ್, ಇಂತಹ ಎಷ್ಟು ಜನ ಹೆಣ್ಣು ಮಕ್ಕಳು ಯುದ್ಧ ಭೂಮಿಯಲ್ಲಿ ಹೋರಾಟ ಮಾಡಿದ್ದಾರೆ ಎಂದು ಸ್ಮರಿಸಿದರು.

ಯುದ್ಧಭೂಮಿಯಿಂದ ಹಿಡಿದು ವಿಮಾನ ನಡೆಸುವವರೆಗೂ ಸಾಧನೆ ಮೆರೆದಿದ್ದಾರೆ. ಉದ್ಯೋಗ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯರು ಒಳಗಾಗುತ್ತಿದ್ದಾರೆ. ಹೆಣ್ಣಿನ ಜಾತಿಯನ್ನು ಕೀಳರಿಮೆಯಿಂದ ಮಾತನಾಡುವುದು, ಹೆಣ್ಣು ಮಕ್ಕಳನ್ನು ಸಿನಿಮಾದಲ್ಲಿ ಬಿಂಬಿಸುವ ರೀತಿ ನೋವುಂಟು ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಜಯಪ್ರಕಾಶ್ ಗೌಡ, ಕರ್ನಾಟಕ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ನಾಗರೇವಕ್ಕ, ಪ್ರೊ.ಅನಿತಾ ಉಪಸ್ಥಿತರಿದ್ದರು. ಸಂವಾದದಲ್ಲಿ ಪ್ರೊ.ಶ್ರೀದೇವಿ , ಪ್ರೊ.ಶ್ರೀಲತಾ, ನಂದಿನಿ ಜಯರಾಮ್, ಮಂಜುಳಾ ಜಯಪ್ರಕಾಶ್, ಪ್ರೊ.ಎಸ್ ಬಿ ಶಂಕರ್ ಗೌಡ, ಸುಜಾತ ಕೃಷ್ಣ ಮುಂತಾದವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!