ವೈಕುಂಠ ಏಕಾದಶಿಯ ಪ್ರಯುಕ್ತ ನಗರದ ಹಲವೆಡೆ ಭಕ್ತರು ಶ್ರದ್ಧಾ ಭಕ್ತಿಯಿಂದ ಶ್ರೀವೆಂಕಟೇಶ್ವರ, ಪದ್ಮಾವತಿ, ಲಕ್ಷ್ಮಿಯ ದರ್ಶನ ಪಡೆದರು.
ಇಂದು ಬೆಳಿಗ್ಗೆಯಿಂದಲೇ ಮಂಡ್ಯ ನಗರದ ಹಲವೆಡೆ ಇರುವ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ ಒಳ್ಳೆಯದು ಎಂಬ ಹಿನ್ನಲೆಯಲ್ಲಿ
ಸಹಸ್ರಾರು ಸಂಖ್ಯೆಯ ಭಕ್ತರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮಂಡ್ಯ ನಗರದ ಹೊಸಹಳ್ಳಿ-ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ವೈಕುಂಠ ಏಕಾದಶಿಯ ಪ್ರಯುಕ್ತ ಭಕ್ತಾಧಿಗಳು ಪೂಜೆ ಸಲ್ಲಿಸಿ,ಪದ್ಮಾವತಿ,ಲಕ್ಷ್ಮಿ ದೇವಿಯ ಬಳಿ ಬಂದು ಇಷ್ಟಾರ್ಥಗಳನ್ನು ಪೂರೈಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಮಂಡ್ಯದ ನೆಹರು ನಗರ ಬಡಾವಣೆಯ ಭೋವಿ ಕಾಲೋನಿಯಲ್ಲಿ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಭಕ್ತಾಧಿಗಳು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಹಾಗೆಯೇ ಮಂಡ್ಯದ ಕಿರಗಂದೂರು ಗ್ರಾಮದಲ್ಲಿರುವ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಜನರು ಆಗಮಿಸಿ ದೇವರ ದರ್ಶನ ಪಡೆದರು.
ವೈಕುಂಠ ಏಕಾದಶಿಯ ಪ್ರಯುಕ್ತ ಹಲವುದೇವಸ್ಥಾನಗಳಲ್ಲಿ ವಿಶೇಷವಾಗಿ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.ದೇವಸ್ಥಾನಕ್ಕೆ ಬಂದ ಭಕ್ತಾದಿಗಳು ವೈಕುಂಠದ ಬಾಗಿಲ ಮೂಲಕ ತೆರಳಿ ದರ್ಶನ ಪಡೆದರು.
ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು.
ಹೊಳಲಿನಲ್ಲೂ ಆಚರಣೆ
ಮಂಡ್ಯ ತಾಲೂಕು ಹೊಳಲು ಗ್ರಾಮದ ವಿನಾಯಕ ಗೆಳೆಯರ ಬಳಗದ ವತಿಯಿಂದ ಎಂಟನೇ ವರ್ಷದ ಆರಾಧನಾ ಮಹೋತ್ಸವ ಕೇಶವ ನಾರಾಯಣ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಆಂಜನೇಯ ಮೂರ್ತಿಗೆ ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಿ, ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದರು. ಭಕ್ತಾದಿಗಳಿಗೆ ಸಂಘದ ವತಿಯಿಂದ ಲಾಡು ಪ್ರಸಾದ ವಿನಿಯೋಗ ಮಾಡಲಾಯಿತು, ನಂತರ ಸಂಜೆ ಸಂಗೀತ ವಾದ್ಯ ಕಾರ್ಯಕ್ರಮವು ಜರುಗಿದವು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ನವೀನ್ ಗೌಡ ಯಶವಂತ, ಉಮೇಶ್ ಶಿವಲಿಂಗ, ಚೆಲುವರಾಜು, ಅನಿಲ್, ನಾಗೇಶ್ ಚಂದನ್ ಮತ್ತಿತರರು ಭಾಗವಹಿಸಿದ್ದರು.