ಕೃಷಿ ಉದ್ದೇಶಕ್ಕೆ ಸಾಲ ಮಾಡಿಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರೈತರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮದ ರೈತ ಮಹಾಲಿಂಗಯ್ಯ(65) ಸಾಲಬಾಧೆಗೆ ಬಲಿಯಾದವರು.
ಇವರಿಗೆ ಸ್ವಗ್ರಾಮ ಇಂಡುವಾಳಿನಲ್ಲಿ ಒಂದೂವರೆ ಎಕರೆ ಜಮೀನಿದ್ದು, ಭತ್ತ ಬೆಳೆದಿದ್ದರು. ಇದುವರೆಗೆ ಕೃಷಿ ಉದ್ದೇಶಕ್ಕೆಂದು ಬ್ಯಾಂಕ್ನಲ್ಲಿ ಒಡವೆ ಸಾಲ, ಸೊಸೈಟಿ ಸಾಲ ಹಾಗೂ ಕೈಸಾಲ ಸೇರಿ ಸುಮಾರು 6ರಿಂದ 7. ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ.
ಸಾಲಬಾಧೆ ತಾಳಲಾರದೆ ಗ್ರಾಮದ ತಮ್ಮ ಜಮೀನಿನ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಇವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 15 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮೃತರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.