ಕುಷ್ಠ ರೋಗಿಗಳು, ಶಾಪಗ್ರಸ್ತರಲ್ಲ ಮತ್ತು ಕಳಂಕಿತರಲ್ಲ ಕುಷ್ಠ ರೋಗಿಗಳನ್ನು ಸಮಾಜದಲ್ಲಿ ಯಾವುದೇ ತಾರತಮ್ಯ ಮಾಡದೇ ಗೌವಯುತವಾಗಿ ಕಾಣಬೇಕೆಂದು ಆಡಳಿತ ವೈದ್ಯಾಧಿಕಾರಿ ಡಾ.ಉಷಾ ಎಂ ಎಸ್ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಶೆಟ್ಟಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕೆ ಶೆಟ್ಟಹಳ್ಳಿ ವತಿಯಿಂದ ಏರ್ಪಡಿಸಿದ “ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ” ಕುರಿತು ಮಾತನಾಡಿದರು.
ಈ ರೋಗವು ಮುಖ್ಯವಾಗಿ ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ ವ್ಯಕ್ತಿಯ ದೇಹದ ಮೇಲೆ ತಿಳಿ ಬಿಳಿ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ದಪ್ಪದಾದ ಅಥವಾ ಹೊಳೆಯುವ ಎಣ್ಣೆ ಯುಕ್ತ ಚರ್ಮ, ಗಂಟುಗಳು, ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥತೆ, ಕೈ ಕಾಲುಗಳಲ್ಲಿ ವಾಸಿಯಾಗದ ಹುಣ್ಣು, ನಡೆಯುವಾಗ ಕಾಲು ಎಳೆಯುವುದು, ಕಾಲುಗಳಲ್ಲಿ ಜುಮ್ಮೆನುಸುವಿಕೆ, ಕೈಗಳಲ್ಲಿ ವಸ್ತುಗಳನ್ನು ಹಿಡಿಯಲು ಅಥವಾ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಇವುಗಳು ರೋಗದ ಲಕ್ಷಣಗಳಾಗಿವೆ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ ಉಚಿತವಾಗಿ ಬಹು ಔಷಧಿ ಚಿಕಿತ್ಸೆ ಪಡೆದು ಕುಷ್ಠ ರೋಗವನ್ನು ತೊಲಗಿಸಿರಿ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ, ಜ.30 ರಿಂದ ಫೆ 13 ರವರೆಗೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು ರೋಗ ಲಕ್ಷಣಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವದು, ಕುಷ್ಠ ರೋಗದಿಂದ ಉಂಟಾಗುವ ಅಂಗವಿಕಲತೆ ಬಗ್ಗೆ ನೆರೆ ಹೊರೆ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಪ್ರೇರೆಪಿಸುವದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಂ ಪಂ ಸದಸ್ಯ ಅಪ್ಪಾಜಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಸಹ ಶಿಕ್ಷಕರಾದ ಆರ್ ರವೀಂದ್ರ, ಪ್ರೇಮ ಎಂ, ಉಷಾ ಬಿ, ಜಿ ಕೆ ರಾಜೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಪಿ ಪಣಿಂದ್ರ, ಮುಖಂಡರಾದ ಮೋಹನ ಕುಮಾರ್ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.