ಏಕಾಗ್ರತೆ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಲು ಕ್ರೀಡೆ ಅವಶ್ಯಕ ಎಂದು ಎಸ್ ಬಿ ಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು.
ಮಂಡ್ಯ ನಗರದ ಗ್ರೀನ್ ಪ್ಯಾಲೇಸ್ ಆವರಣದಲ್ಲಿ ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ನಡೆದ ಗೀತಾಂಜಲಿ ಚಾಂಪಿಯನ್ ಲೀಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಶಿಕ್ಷಣ ಸಂಸ್ಥೆ ಕ್ರೀಡೆಗಳಿಗೆ ಮೊದಲ ಆದ್ಯತೆ ನೀಡುತ್ತಿದೆ.ಮಕ್ಕಳಲ್ಲಿ ಏಕಾಗ್ರತೆ ಮೂಡಲು ಹಾಗೂ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಕ್ರೀಡೆ ಸಹಕಾರಿ. ಆದ್ದರಿಂದ ನಮ್ಮ ಶಿಕ್ಷಣ ಸಂಸ್ಥೆ ಕ್ರೀಡೆಗೆ ಸಾಕಷ್ಟು ಪ್ರಾಮುಖ್ಯತೆ ನೀಡಿದೆ ಎಂದರು.
ವಿದ್ಯಾರ್ಥಿಯ ಜೀವನದಲ್ಲಿ ಕ್ರೀಡಾ ಚಟುವಟಿಕೆಗಳು ಬಹಳ ಮುಖ್ಯ. ಕ್ರೀಡೆಯಿಂದ ಕಲಿತ ಶಿಸ್ತು ಜೀವನದುದ್ದಕ್ಕೂ ಬರುತ್ತದೆ. ಕ್ರೀಡೆಯಲ್ಲಿ ಯಾವುದೇ ಜಾತಿ ಬೇಧ ಇರರುವುದಿಲ್ಲ ನಾವೆಲ್ಲರೂ ಒಂದೇ ಎನ್ನುವ ಭಾವ ಮೂಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಬಿಇಟಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಹೆಚ್.ಸರೋಜ, ಉಪ ಪ್ರಾಂಶುಪಾಲ ಮಾರ್ಟಿನ್ ಸಿ.ಶಾಜಿ, ಮುಖ್ಯ ಶಿಕ್ಷಕ ವಿ.ಡಿ.ರಾಜಣ್ಣ ಹಾಜರಿದ್ದರು.