ಗುರುವಿಗೂ, ಶಿಕ್ಷಕನಿಗೂ ಯಾವುದೇ ಸಂಬಂಧವಿಲ್ಲ. ಶಿಕ್ಷಕ ಎಂದರೆ ಪಾಠ ಹೇಳಿಕೊಡುವವರು, ಗುರು ಎಂದರೆ ನಮ್ಮ ಬದುಕಿಗೆ ಬೇಕಾಗಿರುವ ಎಲ್ಲ ಜ್ಞಾನ ಸಂಪತ್ತನ್ನು ತನ್ನ ನಡೆ-ನುಡಿ ಮೂಲಕ ತೋರಿಸಿಕೊಡುವವರು ಎಂದು ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ ಹೇಳಿದರು.
ಮಂಡ್ಯ ನಗರದ ಗುರುದೇವ ಲಲಿತಕಲಾ ಅಕಾಡೆಮಿಯಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅಕಾಡೆಮಿಯ ನಿರ್ದೇಶಕಿ ಚೇತನಾ ರಾಧಾಕೃಷ್ಣ ಹಾಗೂ ಸಂಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಅವರನ್ನು ಶಿಷ್ಯ ವೃಂದ ಮತ್ತು ಪೋಷಕರ ಪರವಾಗಿ ಸನ್ಮಾನಿಸಿ ಮಾತನಾಡಿದ ಅವರು, ಗುರು ನಿರಂತರವಾಗಿ ನಮ್ಮಲ್ಲಿ ಪ್ರಭಾವವನ್ನು ಬೀರುತ್ತಲೇ ಇರುತ್ತಾರೆ. ಗುರು ಎಂಬ ಪದಕ್ಕೆ ವಿಶೇಷವಾಗಿ ಅರ್ಥೈಸಿದರೆ ನಮ್ಮ ಅಂಧಕಾರವನ್ನು ಹೋಗಲಾಡಿಸುವವರು ಎಂದು ತಿಳಿಸಿದರು.
ಗುರು ಪೂರ್ಣಿಮೆ ಅಧ್ಯಾತ್ಮಿಕ ಮಾತ್ರವಲ್ಲ, ಶೈಕ್ಷಣಿಕವಾಗಿ, ಲೌಕಿಕವಾಗಿ ಹಾಗೂ ಸಾರ್ವತ್ರಿಕವಾಗಿ ಎಲ್ಲ ವಿದ್ಯೆ ಕೊಡುವವರನ್ನು ಬ್ರಹ್ಮ ಎಂದು ಕರೆಯುತ್ತೇವೆ ಎಂದರು.
ಅಕಾಡೆಮಿಯ ನಿರ್ದೇಶಕಿ ಚೇತನಾ ರಾಧಾಕೃಷ್ಣ ಮಾತನಾಡಿ, ವೇದಗಳ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆ ಇದೆ. ಯಾವುದೇ ವಿಷಯವನ್ನು ತಿಳಿದುಕೊಳ್ಳದೆ ಮಾತನಾಡುವುದು ಸರಿಯಲ್ಲ. ಭರತನಾಟ್ಯದ ಬಗ್ಗೆ ತಿಳಿದುಕೊಳ್ಳದೆ ಏನು ಮಹಾ ಎಂದು ಹೀಯಾಳಿಸುತ್ತಾರೆ. ಅದಕ್ಕೆ ಗಮನ ಕೊಡದೆ ನಮ್ಮ ಕೆಲಸವನ್ನು ನಾವು ಮಾಡಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.