ಮಳವಳ್ಳಿ ಶಾಸಕ ಕೆ.ಅನ್ನದಾನಿ ವಿರುದ್ಧ ನಮ್ಮ ರಾಜಕೀಯ ವಿರೋಧಿಗಳು ಬಾಲಿಶ ಆರೋಪಗಳನ್ನು ಮಾಡಿರುವುದು ಖಂಡನೀಯ ಎಂದು ಜೆಡಿಎಸ್ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಡಿ.ಜಯರಾಮ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ವ್ಯಯುಕ್ತಿಕ ಆಮಿಷಕ್ಕೆ ಬಲಿಯಾಗಿ ಅನ್ನಪಕ್ಷ ಸೇರ್ಪಡೆಗೊಂಡಿದ್ದಾರೆ. ತಮ್ಮ 46 ವರ್ಷದ ಜನತಾ ಪರಿವಾರದ ದುಡಿಮೆಯಲ್ಲಿ ಸ್ವಂತಕ್ಕೆ ಏನು ಮಾಡಿಲ್ಲ ಎಂಬ ಆರೋಪ ವ್ಯಯುಕ್ತಿಕವಾಗಿದ್ದು, ರಾಜಕಾರಣದಲ್ಲಿ ಇದಕ್ಕೆ ಅಸ್ಪದವಿಲ್ಲವೆಂದರು.
2018ರಲ್ಲಿ ವೀಳ್ಯೆದೆಲೆ ಬೆಳೆಗಾರರ ಸಂಘ ಆಸ್ತಿತ್ವಕ್ಕೆ ಬಂದಾಗ ಅದರ ಬಗ್ಗೆ ಉದಾಸೀನ ಮಾಡಿದ ದೊಡ್ಡಯ್ಯ ಅವರು ಆ ವರ್ಗದ ರೈತರ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದಿದ್ದಾರೆ. ತುಂಡು ಜಮೀನನಲ್ಲಿ ವೀಳ್ಯೆದೆಲೆ ವ್ಯವಸಾಯ ನಡೆಸುತ್ತಿರುವ ರೈತರ ಬಗೆ ಶಾಸಕ ಅನ್ನದಾನಿ ಕಾಳಜಿವಹಿಸಿದ್ದರೆಂದು ತಿಳಿಸಿದರು.
ಮಳವಳ್ಳಿ ತಾಲ್ಲೂಕಿನಲ್ಲಿ 1.5 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಕಾಮಗಾರಿ ಆರಂಭಗೊಂಡಿದ್ದು, ಗಂಗಾಮತಸ್ಥ ಸಮುದಾಯದವರಿಗೆ 220 ಮನೆಗಳನ್ನು ನಿರ್ಮಿಸಿ ನಮ್ಮ ಶಾಸಕರು ಹಸ್ತಾಂತರ ಮಾಡಿದ್ದಾರೆ. 1000 ಮಂದಿ ಫಲಾನುಭವಿಗಳಿಗೆ ಲೇಬರ್ ಕಾರ್ಡ್ ವಿತರಿಸಿದ್ದಾರೆ. 60 ಮಂದಿ ಮೀನುಗಾರರಿಗೆ ದೋಣಿ ಹಾಗೂ ಬಲೆ ವಿತರಿಸಿದ್ದಾರೆ. ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ನಿವೇಶನ ಪಡೆಯಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ಸಾಗಿವೆ. ಈ ಬಗ್ಗೆ ಸೂಕ್ತ ದಾಖಲೆಯನ್ನು ಮುಂದಿನ ದಿನದಲ್ಲಿ ಬಹಿರಂಗ ಪಡಿಸುವುದಾಗಿ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಸಾತನೂರು ಜಯರಾಮ್, ನಾರಾಯಣ್, ಶ್ರೀಧರ್, ಮಣಿ ನಾರಾಯಣ್, ಪ್ರಭು, ಸಿದ್ಧಾಚಾರ್ ಇತರರಿದ್ದರು.