ಮದ್ಯವ್ಯಸನಕ್ಕೆ ದಾಸನಾಗಿರುವ ವ್ಯಕ್ತಿಗಳ ಕುಟುಂಬಗಳು ಹಲವಾರು ಸಂಕಷ್ಟಕ್ಕೆ ಸಿಲುಕಿ ಬೀದಿ ಪಾಲಾಗುತ್ತಿವೆ ಹಾಗಾಗಿ ಮದ್ಯವರ್ಜನ ಶಿಬಿರಗಳು ನೆರವಾಗುತ್ತಿವೆ ಎಂದು ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು ಹೇಳಿದರು.
ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದ ಶ್ರೀಬಾಲಭೈರವೇಶ್ವರ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮೇಲುಕೋಟೆ ಯೋಜನಾ ಕಚೇರಿ, ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸೇರಿದಂತೆ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ 1618ನೇ ಮದ್ಯವರ್ಜನೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೂ ಸಮಾಜದಲ್ಲಿ ಹಲವಾರು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಕುಡಿತದ ದುಶ್ಚಟಕ್ಕೆ ಒಳಗಾಗಿರುವ ವ್ಯಕ್ತಿಗಳ ಮನಪರಿವರ್ತನೆಗಾಗಿ ಇಂತಹ ಮದ್ಯವರ್ಜನ ಶಿಬಿರಗಳನ್ನು ಆಯೋಜನೆ ಮಾಡಿ, ಆ ಮೂಲಕ ಸಾವಿರಾರು ಜನರನ್ನು ಮದ್ಯವಸನ ಮುಕ್ತರನ್ನಾಗಿ ಮಾಡುವ ಮೂಲಕ ಆ ಕುಟುಂವಕ್ಕೆ ಆಸರೆಯಾಗಿ ನಿಲ್ಲುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪುಣ್ಯದ ಕೆಲಸಕ್ಕಾಗಿ ನಾವು ಸಹ ವೈಯುಕ್ತಿಕವಾಗಿ ನೆರವು ನೀಡಲು ಸಿದ್ದರಿದ್ದೇವೆ ಎಂದರು.
ಜಿಲ್ಲಾನಿರ್ದೇಶಕ ಎಚ್.ಎಲ್. ಮುರುಳೀಧರ್ ಮಾತನಾಡಿ, ಕುಡಿತದಂತಹ ದುಶ್ಚಟಕ್ಕೆ ದಾಸರಾಗಿರುವ ವ್ಯಕ್ತಿಗಳ ಮನ ಪರಿವರ್ತನೆ ಮಾಡಿ ಅವರು ಸಮಾಜದಲ್ಲಿ ಗೌರವಯುತವಾದ ಬದುಕು ನಡೆಸಲು ಸಹಕಾರಿಯಾಗಬೇಕೆನ್ನು ವುದೇ ಧರ್ಮಸ್ಥಳ ಸಂಸ್ಥೆಯ ಮದ್ಯವರ್ಜನ ಶಿಬಿರದ ಉದ್ದೇಶವಾಗಿದೆ. ಜತೆಗೆ ಶಾಲಾ-ಕಾಲೇಜು ಯುವಕರು ಸಹ ಹೆಚ್ಚಾಗಿ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ. ಯುವಕರಿಗೆ ಅರಿವು ಮೂಡಿಸುವ ಸಲುವಾಗಿ ಕಾಲೇಜುಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಹಾಗಾಗಿ ಶಿಬಿರದಲ್ಲಿ ಭಾಗವಹಿಸಿರುವ ಶಿಭಿರಾರ್ಥಿಗಳು ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಟಿಎಚ್ಓ ಡಾ.ಸಿ.ಎ.ಅರವಿಂದ್ ಮಾತನಾಡಿ, ಮದ್ಯಸೇವನೆಗೆ ಒಳಗಾಗುವ ವ್ಯಕ್ತಿಗಳಿಗೆ ಸಕ್ಕರೆ ಕಾಯಿಲೆ, ಬಿಪಿ, ಕ್ಯಾನ್ಸರ್, ಲಿವರ್ ಡ್ಯಾಮೇಜ್ ನಂತಹ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ಜನರು ವ್ಯಸನ ಮುಕ್ತರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮದ್ಯವರ್ಜನ ಶಿಬಿರದ ಅಧ್ಯಕ್ಷ ಎಂ.ಎಸ್.ಕುಮಾರ್, ಗೌ.ಅಧ್ಯಕ್ಷ ಜವರೇಗೌಡ, ಎಎಸ್ ಐ ಜಯರಾಮು, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅಶ್ವಥ್ ಕುಮಾರೇಗೌಡ, ಜೆ.ಪಿ.ಶಿವಶಂಕರ್, ಒಕ್ಕೂಟದ ಅಧ್ಯಕ್ಷೆ ಅನಿತಾ ರಾಣಿ, ಗ್ರಾಪಂ ಸದಸ್ಯ ಧನಂಜಯ್, ಯೋಜನಾಧಿಕಾರಿ ಸರೋಜ, ಮಾದವನಾಯ್ಕ, ಪವಿತ್ರ, ಶಿವನಂಜು, ಸುರೇಶ್, ಜವರೇಗೌಡ, ಶಿಭಿರಾಧಿಕಾರಿ ವಿದ್ಯಾದರ, ನೇತ್ರಾವತಿ, ಲೋಕೇಶ್ವರಿ ಸೇರಿದಂತೆ ಹಲವರು ಹಾಜರಿದ್ದರು.