ಕುಮಾರಸ್ವಾಮಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ನೆನಸಿಕೊಳ್ಳದೆ ಸ್ಪೂರ್ತಿ ಇರಲ್ಲ. ಕುಮಾರಸ್ವಾಮಿ ಅವರ ಭಾಷಣ ಕೇಳಿದ್ದೇನೆ. ಅದರಲ್ಲಿ “ಪ್ರಜ್ವಲ್ ನನ್ನ ಮಗ” ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ, ಪ್ರಜ್ವಲ್ ಅವರ ಕುಟುಂಬದ ಕುಡಿ. ನೂಲಿನಂತೆ ಸೀರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಪ್ರಕರಣದಲ್ಲಿ ಮಹಾನ್ ನಾಯಕರ ಕೈವಾಡ ಇದೆ ಎಂದು ಹೇಳಿದ್ದರು. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಂಗಳವಾರ ಡಿಕೆಶಿ ಮಾತನಾಡಿದರು.
“ನಾನು ಇಂತಹ ಚಿಲ್ಲರೆ ಕೆಲಸವನ್ನು ಮಾಡುವುದಿಲ್ಲ. ಬೆಳಿಗ್ಗೆ ಡ್ರೈವರ್ ಅಂತೆ, ಬಿಜೆಪಿಯವರು ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾನಂತ ಇಂತಹ ಚಿಲ್ಲರೆ ಕೆಲಸ ಮಾಡಲ್ಲ. ಬದಲಾಗಿ ಚುನಾವಣೆಯಲ್ಲಿ ಎದುರಿಸುತ್ತೇನೆ. ನನ್ನ ಬಳಿ ಪೆನ್ ಡ್ರೈವ್ ಇದೆ ಎಂದು ಹೆದರಿಸಲ್ಲ. ಬದಲಾಗಿ ಅಸೆಂಬ್ಲಿಗೆ ಬನ್ನಿ ಎಂದು ಕರೆದಿದ್ದೇನೆ” ಎಂದರು.
“ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ವಜಾ ಮಾಡಲಿ ಅಥವಾ ಒಳಗೆ ಇಟ್ಟುಕೊಳ್ಳಲಿ. ಅದೆಲ್ಲ ಕಣ್ಣು ಒರೆಸುವ ನಾಟಕ. ರಾಜಕಾರಣದಲ್ಲಿ ನನಗೂ ಗೊತ್ತಿದೆ ಅಮಾನತ್ತು ಅಂದ್ರೇನು ಎಂಬುದು?” ಎಂದು ವಾಗ್ದಾಳಿ ನಡೆಸಿದರು.
“ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡಬೇಕಿದೆ. ರಾಜ್ಯದ ಮರ್ಯಾದೆ ಹೋಗುತ್ತಿದೆ. ಇವರ ಚಟಕ್ಕೆ ವಿಡಿಯೋ ಮಾಡಿಕೊಂಡಿದ್ದಾರೆ. ಭಗವಂತ ಇದನ್ನೆಲ್ಲಾ ಕ್ಷಮಿಸಲ್ಲ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಯಾರು ಜೊತೆಗೆ ಇದ್ದರು? ಯಾರು ಯಾರಿಗೆ ಕರೆ ಮಾಡಿದ್ರು ಕೇಳಿ ಅವರಿಗೆ” ಎಂದು ಡಿಕೆಶಿ ಸವಾಲು ಹಾಕಿದರು.
“ಪ್ರಜ್ವಲ್ ವಿಚಾರದಲ್ಲಿ ಬಿಜೆಪಿಯವರ ಸ್ಟ್ಯಾಂಡ್ ಏನು ಎಂಬುವುದನ್ನು ಹೇಳಬೇಕು. ಪ್ರಹ್ಲಾದ್ ಜೋಶಿ, ಸುನೀಲ್ ಕುಮಾರ್, ಯತ್ನಾಳ್, ಬೊಮ್ಮಾಯಿ, ಶೋಭಕ್ಕ ಯಾಕೆ ಇದರ ಬಗ್ಗೆ ಮಾತಾಡುತ್ತಿಲ್ಲ. ಹಳೆ ವಿಡಿಯೋ ಎಂದು ಸ್ವತಃ ಎಚ್ ಡಿ ರೇವಣ್ಣ ಒಪ್ಪಿಕೊಂಡಿದ್ದಾರೆ. ವಿಡಿಯೋ ವಿಚಾರವಾಗಿ ದೇವರಾಜೇಗೌಡ ಅಮಿತ್ ಶಾಗೆ ಪತ್ರ ಬರೆದ ಸಂಗತಿ ಏನಾಯ್ತು?” ಎಂದ ಪ್ರಶ್ನಿಸಿದರು.
“ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಾರೆ. ಉಡುಪಿಯ ಶಾಲೆಯಲ್ಲಿ ನಡೆದ ಪ್ರಕರಣವೊಂದರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ಕಳಿಸಲಾಗಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಯಾಕೆ ಮಾತಾಡುತ್ತಿಲ್ಲ? ಅವರ ಕುಟುಂಬದವರು ಹೌದೋ ಇಲ್ಲವೋ ನೀವು ಹೇಳಬೇಕು” ಎಂದರು.