ಮಂಡ್ಯ ನಗರದಲ್ಲಿ ಮುಂಬರುವ ಜನವರಿ 4ರಂದು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವೈಶಿಷ್ಠತೆ ಮತ್ತು ಕನ್ನಡತನದೊಂದಿಗೆ ಆಚರಿಸಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ ತಿಳಿಸಿದರು.
ಮಂಡ್ಯ ನಗರದಲ್ಲಿರುವ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆ ಕಚೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮ್ಮೇಳನ ಕುರಿತ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆಮಾಡಿರುವುದಕ್ಕೆ ಧನ್ಯವಾದಗಳು, ಸಾಹಿತ್ಯ ಕ್ಷೇತ್ರದಲ್ಲಿ ದುಡಿಯವ ಆಸಕ್ತಿ ನಮ್ಮಲ್ಲಿದೆ, ಕನ್ನಡತನವನ್ನು ಬೆಳೆಸೋದು ಎಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದರು.
ಸಮ್ಮೇಳನವನ್ನು ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲು ತಯಾರಿ ಮಾಡೋಣ, ಜತೆಯಲ್ಲೇ ವಿಶೇಷವಾಗಿ ಮಹಿಳೆಯರ ಆರೋಗ್ಯ ತಪಾಸಣೆಯೂ ಆಗಲಿ, ಕೆಂಪೇಗೌಡ ಆಸ್ಪತ್ರೆ ಮತ್ತು ಇತರೆ ಆಸ್ಪತ್ರೆಗಳಿಂದ ನೆರವು ಪಡೆಯೋಣ, ಕ್ಯಾನ್ಸರ್, ಸ್ತ್ರೀರೋಗಗಳ ಬಗ್ಗೆ ತಪಾಸಣೆಗೆ ಹೆಚ್ಚು ಮಹತ್ವ ನೀಡಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ ಚಾಮಲಾಪುರ ಮಾತನಾಡಿ, ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡಿ, ಅವರಿಂದ ಸಲಹೆ ಸೂಚನೆ ಪಡೆಯೋಣ, ಸಮ್ಮೇಳನದಲ್ಲಿ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಸಂಘಗಳು, ಸಾಹಿತ್ಯ ಆಸಕ್ತರು ಸೇರುವಂತೆ ಮಾಡಲು ಶಕ್ತರಗೋಣ. ಒಂದು ದಿನ ಪೂರ ನಡೆಯುವ ಸಮ್ಮೇಳನದಲ್ಲಿ ಜನರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯಕ್ರಮಗಳು, ಹಾಸ್ಯಗೋಷ್ಠಿಗಳು, ಆರೋಗ್ಯಕರ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡೋಣ ಎಂದು ಹೇಳಿದರು.
ಸಭೆಯಲ್ಲಿ ನಗರ ಕಸಾಪ ಅಧ್ಯಕ್ಷೆ ಸುಜಾತಕೃಷ್ಣ, ತಾಲೂಕು ಅಧ್ಯಕ್ಷ ಮಂಜು ಮುತ್ತೇಗೆರೆ, ಪದಾಧಿಕಾರಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಜಿ.ಧನಂಜಯ ದರಸಗುಪ್ಪೆ, ಪತ್ರಕರ್ತ ಕೃಷ್ಣ, ಗಾಯಕ ಮಹದೇವಸ್ವಾಮಿ, ಚಂದ್ರಲಿಂಗು, ಶೋಭಾ, ಹೀನಾ, ರಶ್ಮಿ, ರತ್ನಪ್ರಭಾ, ಸರಳಾ, ನಾಗರತ್ನ, ಲಲಿತಾ ಮತ್ತಿತರರಿದ್ದರು.