ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ-ಗಂಗಾ ರಥಯಾತ್ರೆಗೆ ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು ಬೆಳಿಗ್ಗೆ ಕೆಆರ್ ಎಸ್ ನಲ್ಲಿ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು .KRS ಡ್ಯಾಂನ ಮುಖ್ಯ ದ್ವಾರದ ಬಳಿ ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಾಯಿತು.ಪವಿತ್ರ ಜಲವನ್ನು ಕಳಸಕ್ಕೆ ತುಂಬಿಕೊಳ್ಳಲಾಯಿತು.
ಕಾವೇರಿ ನೀರನ್ನು ಸಂಗ್ರಹಿಸಿದ ಕಳಸಕ್ಕೆ ಗಂಗಾ ಪೂಜೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಥಯಾತ್ರೆ ಯಶಸ್ವಿಯಾಗಿ ನಡೆದು ರಾಜ್ಯದ ನೀರಾವರಿ ಯೋಜನೆಗಳು ಸುಗಮವಾಗಿ ನಡೆಯುವಂತೆ ಸಂಕಲ್ಪ ಮಾಡಿದರು. ಹಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಶಾಸಕರಾದ ಸಿ.ಎಸ್.ಪುಟ್ಟರಾಜು,ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಪ್ಪಾಜಿಗೌಡ, ಶರವಣ ಸೇರಿದಂತೆ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.
ರಾಜ್ಯಾದ್ಯಂತ ಹದಿನೈದು ಜನತಾ ಜಲಧಾರೆ ಯಾತ್ರಾ ರಥಗಳು ಸಂಚರಿಸಲಿದ್ದು,ಒಟ್ಟು 94 ಕಡೆಗಳಲ್ಲಿ ನದಿ ನೀರು ಸಂಗ್ರಹಣೆ ಮಾಡುವ ಉದ್ದೇಶವಿದೆ.ರಾಜ್ಯದ 180ಕ್ಕೂ ಅಧಿಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಜಲಧಾರೆ ರಥ ಸಂಚರಿಸಲಿದ್ದು, ಮೇ 8 ರೊಳಗೆ ಬೆಂಗಳೂರು ಸೇರಲಿದೆ.ರಾಜ್ಯಾದ್ಯಂತ ಸಂಗ್ರಹವಾಗುವ ಜಲವನ್ನು ಜೆಡಿಎಸ್ ಕಚೇರಿಯಲ್ಲಿಟ್ಟು ನಿತ್ಯಗಂಗಾ ಪೂಜೆ ನಡೆಸಲಾಗುವುದು ಎಂದು ಜೆಡಿಎಸ್ ಕಾರ್ಯಕರ್ತರು ತಿಳಿಸಿದರು.