ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಪಕ್ಷವು ತನ್ನ ನಿಲುವು, ತತ್ವ, ಸಿದ್ಧಾಂತದಿಂದ ಹೊರಗುಳಿದಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿಗೆ ಇಟ್ಟಿರುವ ‘ಜೆಪಿ ಭವನ’ ಎಂಬ ಹೆಸರನ್ನು ಬದಲಿಸಬೇಕು ಎಂದು ನೈಜ್ಯ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರಿಗೆ ವೇದಿಕೆಯ ಮುಖಂಡರು ಪತ್ರ ಬರೆದಿದ್ದಾರೆ. “ಜೆಡಿಎಸ್ ಕೇಂದ್ರ ಕಚೇರಿಗೆ ಜೆಪಿ ಎಂದೇ ಖ್ಯಾತರಾಗಿದ್ದ ಜಾತ್ಯಾತೀತವಾದಿ, ಸಮಾಜವಾದಿ ಹೋರಾಟಗಾರ ಮತ್ತು ರಾಜಕಾರಣ ಜಯಪ್ರಕಾಶ್ ನಾರಾಯಣ್ ಅವರ ಹೆಸರನ್ನು ಜೆಡಿಎಸ್ ಕಚೇರಿಗೆ ಇಡಲಾಗಿದೆ. ಜೆಪಿ ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿದ್ದಕೊಂಡ ಜೆಡಿಎಸ್, ಇತ್ತೀಚಿನ ದಿನಗಳಲ್ಲಿ ಜಯಪ್ರಕಾಶ್ ಅವರ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ನೀಡಿದೆ. ಹೀಗಾಗಿ, ಪಕ್ಷವು ತನ್ನ ಕಚೇರಿಗೆ ಇಟ್ಟಿರುವ ಹೆಸರನ್ನು ಬದಲಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.
“1977ರಲ್ಲಿ ಜನವರಿಯಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಜೈಲು ಸೇರಿದ್ದ ಜಯಪ್ರಕಾಶ್ ನಾರಾಯಣ್, ತಮ್ಮ ತತ್ವ ಸಿದ್ಧಾಂತವನ್ನು ಎಂದಿಗೂ ಬದಲಿಸಲಿಲ್ಲ. ಹಲವಾರು ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ ಜನತಾ ಪಕ್ಷವನ್ನು ಸ್ಥಾಪಿಸಿದರು. ತುರ್ತು ಪರಿಸ್ಥಿತಿ ಕರಾಳತೆಯಿಂದ ಹೊರಬಂದು ದೇಶದಲ್ಲಿ ಮತ್ತೆ ಪ್ರಜಾಸತಾತ್ಮಕ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಭ್ರಷ್ಟಾಚಾರ ತೊಲಗಬೇಕು ನಿಜವಾದ ಜನಶಕ್ತಿ ಆಳ್ವಿಕೆ ಆರಂಭವಾಗಬೇಕು ಎಂದು ಬಯಸಿದ್ದರು ಮತ್ತು ಅದರಂತೆ ನಡೆದರು.
ದೇಶದ ಜನ ಅವರನ್ನು ಲೋಕ ನಾಯಕನೆಂದು ಬಣ್ಣಿಸಿದ್ದರು” ಎಂದು ವಿವರಿಸಿದ್ದಾರೆ.
“ಜಯಪ್ರಕಾಶ್ ಅವರ ತತ್ವ ಸಿದ್ಧಾಂತದ ಅಡಿಯಲ್ಲಿ ಸ್ಥಾಪಿತವಾದ ಜನತಾ ಪಕ್ಷ ಭಾಗವಾದಾಗ ತಾವು (ದೇವೇಗೌಡರು) ಜನತಾದಳ ಜಾತ್ಯತೀತ (ಜೆಡಿಎಸ್) ಸ್ಥಾಪಿಸಿ, ನಂತರದ ದಿನಗಳಲ್ಲಿ ತಾವು ದೇಶದ ಮಣ್ಣಿನ ಮಗ ಎಂದೇ ಖ್ಯಾತಿ ಪಡೆದಿರಿ. ಜೈಪ್ರಕಾಶ್ ನಾರಾಯಣ್ ಅವರ ಮಾರ್ಗದರ್ಶನದಲ್ಲಿಯೇ ರಾಜಕೀಯವಾಗಿ ಉತ್ತುಂಗಕ್ಕೆ ಏರಿದಿರಿ. ಆದರೆ, ಈಗ ಜೆಪಿ ಅವರ ಸಿದ್ದಾಂತ ಮತ್ತು ಜಾತ್ಯತೀತ ತತ್ವಕ್ಕೆ ತಣ್ಣೀರು ಎರಚಿ, ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ. ಇದು ಜೆಪಿ ಅವರ ಅನುಯಾಯಿಗಳು ಮತ್ತು ಅಭಿಮಾನಿಗಳಿಗೆ ನೋವು ತಂದಿದೆ” ಎಂದು ವೇದಿಕೆಯ ಮುಂಖಡರು ಹೇಳಿದ್ದಾರೆ.
ವೇದಿಕೆ ಬರೆದಿರುವ ಪತ್ರಕ್ಕೆ ಹೆ ಹೆಚ್ ಎಂ ವೆಂಕಟೇಶ್, ಕುಣಿಗಲ್ ನರಸಿಂಹಮೂರ್ತಿ, ಮಲ್ಲಿಕಾರ್ಜುನ್ ಬಟ್ರಳ್ಳಿ, ಮಧುಗಿರಿ ಮಹೇಶ್, ಯಲಹಂಕ ಸುಬ್ರಹ್ಮಣ್ಯ ಸಹಿ ಹಾಕಿದ್ದಾರೆ.