ದೇಶ-ವಿದೇಶಗಳಲ್ಲಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಮಿತ್ರ ಪಕ್ಷ ಬಿಜೆಪಿ ಮುಜುಗರಕ್ಕೆ ಒಳಗಾಗಿದೆ.
ಇದೀಗ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣವನ್ನು
ಮುಂದಿಟ್ಟುಕೊಂಡು ಬಿಜೆಪಿಯ ಹೈಕಮಾಂಡ್ ಕುಮಾರಸ್ವಾಮಿ ಅವರಿಗೆ ಪೂರ್ತಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿ,ಎಲ್ಲಾ ಹತ್ತೊಂಬತ್ತು ಎಂಎಲ್ಎ ಗಳನ್ನು ಬಿಜೆಪಿಗೆ ಸೇರಿಸುವಂತೆ ಸೂಚನೆ ನೀಡಿದೆ ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ.
ಬಿಜೆಪಿ ಜೊತೆ ಜೆಡಿಎಸ್ ಪಕ್ಷವನ್ನು ವಿಲೀನ ಮಾಡಿ, ಇಲ್ಲದಿದ್ದರೆ ಪ್ರಜ್ವಲ್ ಪ್ರಕರಣವನ್ನು ನೀವುಗಳೇ ನಿಭಾಯಿಸಿಕೊಳ್ಳಿ. ಬಿಜೆಪಿಯಿಂದ ಯಾವುದೇ ಸಹಾಯ, ಸಹಕಾರ ಸಿಗುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಹಾಗಾಗಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಜೆಡಿಎಸ್ ಪಕ್ಷವನ್ನು ವಿಲೀನ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ ದೇವೇಗೌಡರು ತಕ್ಷಣಕ್ಕೆ ಒಪ್ಪದೇ ಇದ್ದರೂ,ರೇವಣ್ಣ ಅವರನ್ನು ಪ್ರಕರಣದಿಂದ ಹೊರ ತರುವ ದೃಷ್ಟಿಯಿಂದ ದೇವೇಗೌಡರು ಒಪ್ಪೇ ಒಪ್ಪುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಒಟ್ಟಾರೆ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ದಿನನಿತ್ಯ ನಡೆಯುತ್ತಿರುವ ಬೆಳವಣಿಗೆಗಳಿಂದ ದಳಪತಿ ಕುಮಾರಸ್ವಾಮಿ ಸಿಟ್ಟಾಗಿದ್ದು,ಕಾಂಗ್ರೆಸ್ ಪಕ್ಷವನ್ನು ಹಣಿಯಲು ಬಿಜೆಪಿ ಜೊತೆ ಜೆಡಿಎಸ್ ವಿಲೀನಗೊಳಿಸಲು ಮುಂದಾಗಿದ್ದಾರೆ ಎನ್ನುವ ಮಾತು ಅವರ ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿದೆ.ಇದಕ್ಕೆ ದೇವೇಗೌಡರ ಅನುಮತಿ ಇದೆಯೋ,ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.