ದಾರಿತಪ್ಪಿಸುವ ಜಾಹೀರಾತುಗಳ ಬಗ್ಗೆ ಕಠೋರ ನಿಲುವು ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಸೆಲೆಬ್ರಿಟಿಗಳು ಹಾಗೂ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ವಾಣಿಜ್ಯಗೊಳಿಸುವ ಉತ್ಪನ್ನ ಅಥವಾ ಸೇವೆಗಳಲ್ಲಿ ಮೋಸ ಕಂಡು ಬಂದಿದ್ದರೆ ಇವರು ಸಮಾನ ಹೊಣೆಗಾರರು ಎಂದು ತಿಳಿಸಿತು.
ಪತಂಜಲಿ ಆಯುರ್ವೇದದ ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಸಲ್ಲಿಸಿರುವ ಆಕ್ಷೇಪಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ಕಠೋರ ನಿಲುವು ತಳೆದ ಸುಪ್ರೀಂ ಕೋರ್ಟ್,ಜಾಹೀರಾತು ನಿಯಮಗಳನ್ನು ಅನುಸರಿಸಲಾಗುತ್ತಿದೆಯೆ ಎಂಬುದನ್ನು ಮಾಧ್ಯಮಗಳಲ್ಲಿ ಪ್ರದರ್ಶನಪಡಿಸುವವರು ಜಾಹೀರಾತು ನೀಡುವ ಮುನ್ನ ಸ್ವಯಂ ಘೋಷಣೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿತು.
ಇಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಎ ಅಮಾನುಲ್ಲಾ ಅವರಿದ್ದ ಪೀಠವು, ದಾರಿತಪ್ಪಿಸುವ ಜಾಹೀರಾತುಗಳ ತಡೆ ಹಾಗೂ ದಾರಿತಪ್ಪಿಸುವ ಜಾಹೀರಾತುಗಳ ಅನುಮೋದನೆಗಳು 2022ರ ಮಾರ್ಗಸೂಚಿಗಳನ್ನು ಉಲ್ಲೇಖಿಸಿತು. ಉತ್ಪನ್ನ ಹಾಗೂ ಸೇವೆಗಳನ್ನು ಅನುಮೋದಿಸುವ ವ್ಯಕ್ತಿಯು ಅದರ ಬಗ್ಗೆ ಮಾಹಿತಿ ಅಥವಾ ಅನುಭವಗಳನ್ನು ನಿಯಮಾವಳಿ 13ರ ಅಗತ್ಯತೆಗಳಿಗೆ ತಕ್ಕಂತೆ ಪಡೆದಿರಬೇಕು. ಅಲ್ಲದೆ ಮೋಸಗೊಳಿಸುವುದಿಲ್ಲ ಎಂಬುದನ್ನು ಖಚಿತಗೊಳಿಸಿಕೊಳ್ಳಬೇಕು ಎಂದು ಪೀಠವು ತಿಳಿಸಿತು.
ನಿಬಂಧನೆಗಳು ಮುಖ್ಯವಾಗಿ ಆರೋಗ್ಯ ಅಥವಾ ಆಹಾರ ವಲಯಗಳ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಯಾವ ರೀತಿಯ ಉತ್ಪನ್ನ ನೀಡಲಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಅರಿವು ನೀಡುವುದನ್ನು ಖಚಿತಪಡಿಸಬೇಕು. ಅಲ್ಲದೆ ಸೆಲೆಬ್ರಿಟಿಗಳು ಹಾಗೂ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ವಾಣಿಜ್ಯಗೊಳಿಸುವ ಉತ್ಪನ್ನ ಅಥವಾ ಸೇವೆಗಳಲ್ಲಿ ಮೋಸ ಕಂಡು ಬಂದಿದ್ದರೆ ಇವರು ಸಮಾನ ಹೊಣೆಗಾರರು ಎಂದು ಪೀಠವು ಈ ಸಂದರ್ಭದಲ್ಲಿ ತಿಳಿಸಿತು.
ಇದೇ ಸಂದರ್ಭದಲ್ಲಿ ಐಎಂಎ ಪದ್ಧತಿಯನ್ನು ಸುಪ್ರೀಂಕೋರ್ಟ್ ಟೀಕಿಸುವುದು ದುರಾದೃಷ್ಟಕರ ಎಂದು ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಭಾರತೀಯ ವ್ಯದ್ಯಕೀಯ ಒಕ್ಕೂಟದ ಅಧ್ಯಕ್ಷ ಆರ್ ವಿ ಅಶೋಕನ್ ಹೇಳಿಕೆಗೆ ಸಂಬಂಧಿಸಿದಂತೆ ಐಎಂಎಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್ ಮೇ 14ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.