ಮಳವಳ್ಳಿಯಲ್ಲಿಂದು ಮಾಜಿ ಸಚಿವ ಬಿ.ಸೋಮಶೇಖರ್ ಅವರ ನೂರಾರು ಬೆಂಬಲಿಗರು ಇಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಸೋಮಶೇಖರ್ ಮಾತನಾಡಿ, ಬಿಜೆಪಿ ಪಕ್ಷವನ್ನು ಸೇರಿ ನಾನು ತಪ್ಪು ಮಾಡಿದ್ದೇನೆ.ಇದರಿಂದ ಹತ್ತು ವರ್ಷದ ಸಮಯವನ್ನು ಹಾಳು ಮಾಡಿಕೊಂಡಿದ್ದೇನೆ. ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ಹೇಳುವ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ತಲೆ ಎತ್ತದ ರೀತಿಯಲ್ಲಿ ಎಲ್ಲೆಡೆ
ಪ್ರಚಾರ ಕೈಗೊಳ್ಳುತ್ತೇನೆಂದು ಹೇಳಿದರು.
ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಂತಹ ದಲಿತ ನಾಯಕನನ್ನು ಕಾಂಗ್ರೆಸ್ ಪಕ್ಷ ರಾಷ್ಟ್ರಾಧ್ಯಕ್ಷ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ನಾಯಕರಿಗೆ ಗೌರವ ಸಿಗುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡಿ ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಕೋರಿದರು.
ತನ್ನ ಅಧಿಕಾರ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ದಿ ಪಡಿಸಲಾಗಿತ್ತು, ಪ್ರಗತಿಯಲ್ಲಿದ್ದ ಕಾಮಗಾರಿಗಳನ್ನು ನಂತರ ಬಂದ ಶಾಸಕರು ಮುಂದುವರೆಸಲು ವಿಫಲರಾದರು, ಇಂದಿಗೂ ಕೂಡ ಯೋಜನೆಗಳು ಪೂರ್ಣಗೊಂಡಿಲ್ಲ, ನರೇಂದ್ರಸ್ವಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆಯುವುದರ ಜೊತೆಗೆ ಸಚಿವರಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಕ್ಷೇತ್ರದ ಅಭಿವೃದ್ದಿಗೆ ಪಿ.ಎಂ.ನರೇಂದ್ರಸ್ವಾಮಿ ಅವರ ಜೊತೆಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.
ತನ್ನ ನೂರಾರು ಬೆಂಬಲಿಗರು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ವಿಧಾನಸಭಾ ಚುನಾವಣೆಯಲ್ಲಿ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನನ್ನ ತಂದೆಗೆ ಬಿಜೆಪಿಯಿಂದ ಮೋಸ
ಸೋಮಶೇಖರ್ ಪುತ್ರ ದರ್ಶನ್ ಸೋಮಶೇಖರ್ ಮಾತನಾಡಿ, ಕೋಮುವಾದಿ ಪಕ್ಷ ಬಿಜೆಪಿಗೆ ನಮ್ಮ ತಂದೆ ಹೋಗಿರುವುದು ನಮ್ಮ ಕುಟುಂಬಕ್ಕೆ ಇಷ್ಟವಿರಲಿಲ್ಲ, ತನ್ನ ಕೊನೆ ಚುನಾವಣೆಯನ್ನು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ನಂತರ ನಿವೃತ್ತಿಗೊಳ್ಳುತ್ತೇನೆಂದು ಹೇಳಿದ್ದರು. ಇವರ ತೀರ್ಮಾನಕ್ಕೆ ವಿರುದ್ದವಾಗಿ ನಡೆದುಕೊಳ್ಳಬಾರದೆಂದು ಸುಮ್ಮನಿದ್ದೆವು, ಕೊನೆಗೂ ನನ್ನ ತಂದೆಗೆ ಬಿಜೆಪಿ ಪಕ್ಷ ಮೋಸ ಮಾಡಿತು. ಇದರಿಂದ ಬೇಸತ್ತು, ಸರ್ವರನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು, ಕಾಂಗ್ರೆಸ್ ಅಭ್ಯರ್ಥಿ ಪಿ. ಎಂ ನರೇಂದ್ರಸ್ವಾಮಿ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಒಗ್ಗಟ್ಟಿನಿಂದ ಅಭಿವೃದ್ಧಿ
ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಹಿರಿಯ ನಾಯಕರಾದ ಮಾಜಿ ಸಚಿವ ಬಿ. ಸೋಮಶೇಖರ್ ಅವರ ಸಲಹೆಯೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲು ಬದ್ದನಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನೊಂದಿಗೆ ಕಾಂಗ್ರೆಸ್ ಪಕ್ಷದ ಗೆಲ್ಲಿಸಲು ಮುಂದಾಗುವುದಾಗಿ ತಿಳಿಸಿದರು.
ಹಿರಿಯ ನಾಯಕರಾದ ಬಿ. ಸೋಮಶೇಖರ್ರಂತಹ ಹಿರಿಯ ರಾಜಕಾರಣಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡಿರುವುದು ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ, ಅಭಿವೃದ್ದಿ ಏನು ಎನ್ನುವುದನ್ನು ತೋರಿಸಿಕೊಟ್ಟಿರುವ ಸೋಮಶೇಖರ್ರವರ ಮಾರ್ಗದರ್ಶನ ನಮ್ಮಂತಹ ಕಿರಿಯ ರಾಜಕಾರಣಿಗಳಿಗೆ ಅತ್ಯವಶ್ಯಕವಾಗಿದೆ. ಹಿರಿಯ ನಾಯಕತ್ವಕ್ಕೆ ಗೌರವ ಸಿಗುವಂತಹ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಜಿ.ಪಂ.ಮಾಜಿ ಸದಸ್ಯ ಶಿವಲಿಂಗಯ್ಯ, ಮುಖಂಡರಾದ ಟಿ.ಎಲ್.ನಾಗರಾಜು, ಸಾಗ್ಯ ಕೆಂಪಯ್ಯ, ಜಗದೀಶ್, ಸೋಮಣ್ಣ, ಶಿವರಾಜ್, ಸಂತೋಷ್, ವೇದಮೂರ್ತಿ, ಮಹೇಶ್, ಅಣಸಾಲೆ ರಘು, ಪ್ರದೀಪ್, ರಾಮು. ಸಿದ್ದೇಗೌಡ, ವೀರಾಜಿಪುರ ಸೋಮಶೇಖರ್, ಮಲ್ಲಪ್ಪ, ಅಂಬಿಕಾ ಸೇರಿದಂತೆ ಇತರರಿದ್ದರು.