ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್-ವೇ ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಸಿಬ್ಬಂದಿ ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ಎಂ.ಪಿ ನರೇಂದ್ರಸ್ವಾಮಿ ಅವರ ಜೊತೆಗೆ ಏಕವಚನದಲ್ಲಿ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಶಾಸಕ ನರೇಂದ್ರಸ್ವಾಮಿ ಅವರು ಭಾನುವಾರ ಸಂಜೆ ಬೆಂಗಳೂರಿನಿಂದ ಮಳವಳ್ಳಿ ಕಡೆಗೆ ಹೊರಟಿದ್ದರು. ಟೋಲ್ ಪ್ಲಾಜಾದಲ್ಲಿ ಅವರ ಕಾರನ್ನು ತಡೆದ ಸಿಬ್ಬಂದಿ, ಪಾಸ್ ಇದ್ದರೂ ಮುಂದಕ್ಕೆ ಬಿಡಲಿಲ್ಲ. ಈ ಕುರಿತು, ಪ್ರಶ್ನೆ ಮಾಡಿದ ಕಾರು ಚಾಲಕ ಹಾಗೂ ಶಾಸಕರೊಂದಿಗೆ ಏಕವಚನದಲ್ಲಿ ಮಾತನಾಡಿದ್ದಾರೆ.
ಕಾರನ್ನು ತಡೆದ ಟೋಲ್ ಸಿಬ್ಬಂದಿ ಅನಗತ್ಯವಾಗಿ ನಮ್ಮೊಂದಿಗೆ ವಾಗ್ವಾದ ನಡೆಸಿದರು. ಕಾರು ಬಿಡದೆ ದುರಹಂಕಾರದಿಂದ ವರ್ತಿಸಿದರು. ಗೌರವದಿಂದ ಮಾತನಾಡಿ ಎಂದಿದ್ದಕ್ಕೆ, ನೀ ಯಾರಾದರೇನು, ನಾನಿಲ್ಲಿ ಮ್ಯಾನೇಜರ್, ನಿನ್ನ ಪಾಸ್ ತೋರಿಸು ಎಂದು ಏಕವಚನದಲ್ಲಿ ಹೇಳಿದರು ಎಂದು ಶಾಸಕ ಪಿ ಎಂ ನರೇಂದ್ರಸ್ವಾಮಿ ಆರೋಪಿಸಿದ್ದಾರೆ.
ಈ ಘಟನೆ ಕುರಿತು ಸ್ಥಳೀಯ ಪೊಲೀಸರ ಗಮನಕ್ಕೆ ತರಲಾಗಿದೆ. ಯಾರಾದರೂ ಬರಲಿ, ನಾವು ನೋಡದ ಪೊಲೀಸರಾ ? ಎಂದು ಟೋಲ್ ಸಿಬ್ಬಂದಿ ಉಡಾಫೆಯಾಗಿ ನಡೆದುಕೊಂಡರು. ಜನಪ್ರತಿನಿಧಿಗಳ ಜೊತೆ ಗೌರವದಿಂದ ವರ್ತಿಸದ ಸಿಬ್ಬಂದಿ, ಇನ್ನು ಸಾರ್ವಜನಿಕರ ಜೊತೆ ಯಾವ ರೀತಿ ವರ್ತಿಸುತ್ತಾರೆ? ಟೋಲ್ ನಲ್ಲಿ ಅತಿ ಗಣ್ಯರು ತೆರಳಲು ಪ್ರತ್ಯೇಕ ಮಾರ್ಗದ ವ್ಯವಸ್ಥೆ ಇಲ್ಲ. ಈ ಬಗ್ಗೆ ಸ್ಪೀಕರ್ ಗೆ ಪತ್ರ ಬರೆಯಲಾಗುವುದು ಎಂದು ಶಾಸಕ ನರೇಂದ್ರಸ್ವಾಮಿ ತಿಳಿಸಿದ್ದಾರೆ.