Saturday, May 18, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿಯವರ ಆರೋಪಗಳೂ, ಗಾಂಧೀಜಿಯ ಭ್ರಷ್ಟಾಚಾರವೂ….

ಗಿರೀಶ್ ತಾಳಿಕಟ್ಟೆ

ಕುಮಾರಸ್ವಾಮಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ಷರಶಃ ರೊಚ್ಚಿಗೆದ್ದಿದ್ದಾರೆ. ಸರ್ಕಾರ ರಚನೆಯಾಗಿ ನೆಟ್ಟಗೆ ಐವತ್ತು ದಿನಗಳನ್ನೂ ಪೂರೈಸಿಲ್ಲ. ಅಷ್ಟರಲ್ಲಿ ಕುಮಾರಸ್ವಾಮಿಯವರು ಈ ಪರಿ ಮುಗಿಬೀಳುವ ಅಗತ್ಯವಿತ್ತೇ? ಎಂಬ ಪ್ರಶ್ನೆಗೆ ಬಹುಶಃ ಅವರೇ ಉತ್ತರ ಕೊಟ್ಟುಕೊಳ್ಳಬೇಕು. ಯಾಕೆಂದರೆ ಮೂರೂವರೆ ವರ್ಷಗಳ ಕಾಲ ಆಡಳಿತ ನಡೆಸಿದ, ನಲವತ್ತು ಪರ್ಸೆಂಟ್ ಕಮೀಷನ್ ದಂಧೆಯ ಭ್ರಷ್ಟಾಚಾರದ ಆರೋಪಕ್ಕೆ ರಾಜಾರೋಷವಾಗಿ ತುತ್ತಾಗಿದ್ದ ಬೊಮ್ಮಾಯಿಯವರ ಬಿಜೆಪಿ ಸರ್ಕಾರದ ಮೇಲೂ ಕುಮಾರಸ್ವಾಮಿಯವರು ಇಷ್ಟು ತೀವ್ರವಾಗಿ ದಾಳಿ ನಡೆಸಿರಲಿಲ್ಲ. ತಮ್ಮ ಪಕ್ಷದ ಹೀನಾಯ ಸೋಲಿನ ಹತಾಶೆ ಹಾಗೂ ತಮ್ಮ ರಾಜಕೀಯ ಕಡುವೈರಿ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾದದ್ದನ್ನು ಸಹಿಸಿಕೊಳ್ಳಲಾಗದೆ ಅವರು ಹೀಗೆ ವರ್ತಿಸುತ್ತಿದ್ದಾರೆ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಆ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ.

ಯಾಕೆಂದರೆ, ಈ ಚುನಾವಣೆಯಲ್ಲಿ ಕರ್ನಾಟಕದ ಮತದಾರ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ ಹಲವು ಕಾರಣಗಳಲ್ಲಿ ಆ ಪಕ್ಷದ ಮೇಲೆ ಕೇಳಿಬಂದ ಭ್ರಷ್ಟಾಚಾರದ ಆರೋಪ ಬಹುಮುಖ್ಯವಾದದ್ದು. ಚುನಾವಣೆಯಲ್ಲಿ ಕಾಂಗ್ರೆಸ್ ಕೂಡಾ ‘ನಲವತ್ತು ಪರ್ಸೆಂಟ್ ಅಜೆಂಡಾವನ್ನೆ ಬಹುಮುಖ್ಯ ಅಸ್ತ್ರವಾಗಿ ಬಳಸಿತು. ಹೀಗಿರುವಾಗ, ಯಾವ ಭ್ರಷ್ಟತೆಯ ಕಾರಣಕ್ಕೆ ಜನ ಬಿಜೆಪಿಯನ್ನು ಕೆಳಗಿಳಿಸಿ, ತಮಗೆ ಅಧಿಕಾರ ಕೊಟ್ಟಿದ್ದಾರೋ ಅದೇ ಭ್ರಷ್ಟತೆಗೆ ಅಧಿಕಾರಕ್ಕೇರುತ್ತಿದ್ದಂತೆಯೇ ಮುಗಿಬೀಳಲು ಕಾಂಗ್ರೆಸ್ ಆಗಲಿ ಅಥವಾ ಇನ್ನಾವುದೇ ಪಕ್ಷವಾಗಲಿ ಮುಂದಾಗುವುದಿಲ್ಲ. ಕಡೇಪಕ್ಷ, ಕೆಲ ತಿಂಗಳುಗಳವರೆಗಾದರೂ ಆ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತವೆ. ಹಾಗೆ ನೋಡಿದರೆ, ಈ ಹಿಂದೆ ನಿರಂತರ ಐದು ವರ್ಷಗಳ ಆಡಳಿತ ನೀಡಿದ ಸಿದ್ದರಾಮಯ್ಯನವರ ಸರ್ಕಾರದ ಅವಧಿಯ ಹಲವು ಹೆಚ್ಚುಗಾರಿಕೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೂ ಒಂದು ಎನ್ನಬಹುದು. ಯಾಕೆಂದರೆ, ತಮ್ಮ ರಾಜಕೀಯ ವಿರೋಧಿಗಳನ್ನು ಐಟಿ-ಇಡಿ-ಸಿಬಿಐ ಥರಹದ ತನಿಖೆಗಳ ಮೂಲಕ ಬೆದರಿಸಿ, ತಮ್ಮ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಗು ಸಹಾ 2013-2018ರ ಅವಧಿಯಲ್ಲಿ ಒಂದೇಒಂದು ಗಂಭೀರ ಎನ್ನುವಂತಹ ಭ್ರಷ್ಟಾಚಾರವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹುಡುಕಾಡುವ ಪ್ರಾಮಾಣಿಕ ಪ್ರಯತ್ನ ಮಾಡಿಯೂ ಆ ಪಕ್ಷ ಸೋತಿತು. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣವನ್ನು ಮುನ್ನೆಲೆಗೆ ತಂದಿತಾದರೂ, ಅದರಲ್ಲಿ ಸಿದ್ದರಾಮಯ್ಯನವರನ್ನಾಗಲಿ ಅವರ ಸರ್ಕಾರವನ್ನಾಗಲಿ ತಪ್ಪಿತಸ್ಥರನ್ನಾಗಿ ಸಾಬೀತು ಮಾಡುವಲ್ಲಿ ಅಷ್ಟಾಗಿ ಯಶ ಕಾಣಲಿಲ್ಲ.

ಹೀಗಿರುವಾಗ ಕುಮಾರಸ್ವಾಮಿಯವರು ಸರ್ಕಾರ ರಚನೆಯಾಗಿ ಕೇವಲ ಒಂದೂವರೆ ತಿಂಗಳ ಅವಧಿಯಲ್ಲೇ ಸರ್ಕಾರದ ಮೇಲೆ, ಮುಖ್ಯವಾಗಿ ಸಿದ್ದರಾಮಯ್ಯನವರ ಸಿಎಂ ಕಚೇರಿಯ ಮೇಲೆ, ಅವರ ಮಗನ ಮೇಲೆ ಮಾಡುತ್ತಿರುವ ವರ್ಗಾವಣೆ ದಂಧೆ, ಪೇ ಪೋಸ್ಟಿಂಗ್, ಪೆನ್‌ಡ್ರೈವ್ ಆರೋಪಗಳು ಜನರ ದೃಷ್ಟಿಯಲ್ಲಿ ಗಂಭೀರ ಆರೋಪ ಎನಿಸಿಕೊಳ್ಳುವುದಕ್ಕಿಂತ ಹತಾಶೆಯ ವರ್ತನೆಗಳು ಎಂದು ಗುರುತಿಸಿಕೊಳ್ಳುವ ಅಪಾಯವೇ ಹೆಚ್ಚು. ಅದನ್ನೇ ರಾಜಕೀಯ ವಿಶ್ಲೇಷಕರು ಅಂದಾಜು ಮಾಡುತ್ತಿದ್ದಾರೆ. ಸುಭದ್ರ ಸರ್ಕಾರವನ್ನು ನೀಡಲಿ ಎಂದು ಜನ 136 ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಿಸಿಕೊಟ್ಟಿರುವಾಗ, ಪಕ್ಕದ ಮಹಾರಾಷ್ಟ್ರದ ವಿದ್ಯಮಾನಗಳಿಂದ ಪ್ರೇರಿತರಾಗಿ ’ನಮ್ಮ ರಾಜ್ಯದಲ್ಲೂ ಒಬ್ಬ ಅಜಿತ್ ಪವಾರ್ ಯಾವಾಗ ಹುಟ್ಟಿಕೊಳ್ಳುತ್ತಾನೋ ಗೊತ್ತಿಲ್ಲ’ ಎಂಬ ಮಾತಿನ ಮೂಲಕ ಸರ್ಕಾರ ಅಸ್ಥಿರಗೊಳ್ಳಬೇಕೆಂಬ ತಮ್ಮ ಮನದಾಸೆಯನ್ನು ಹೊರಹಾಕಿರುವ ಕುಮಾರಸ್ವಾಮಿಯವರನ್ನು ಜನ ಹತಾಶೆಯ ಮಾನದಿಂಡದಿಂದಲ್ಲದೇ ಬೇರೆ ಅಳತೆಗೋಲಿನಿಂದ ನೋಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯನ್ನು ಸ್ವತಃ ಅವರೇ ನಿರ್ಮಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಈ ಸರ್ಕಾರದ ಭ್ರಷ್ಟಾಚಾರದ ಕುರಿತು ತನ್ನ ಪೆನ್‌ಡ್ರೈವ್‌ನಲ್ಲಿ ದಾಖಲೆಗಳಿದ್ದು, ಅವುಗಳನ್ನು ಅಗತ್ಯ ಬಂದಾಗ ಹೊರಗೆಡವುತ್ತೇನೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಇಲ್ಲಿ ನಾವು ಎರಡು ಸಂಗತಿಗಳನ್ನು ಗಮನಿಸಬೇಕು. ವ್ಯಕ್ತಿಯೊಬ್ಬರಿಗೆ, ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವ ಹಾಗೂ ರಾಜಕೀಯವಾಗಿ ಹೊಣೆಗಾರಿಕೆಯ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರಿಗೆ ಭ್ರಷ್ಟಾಚಾರದ ದಾಖಲೆಗಳು ಸಿಕ್ಕಾಗ, ಅವುಗಳನ್ನು ಸಾರ್ವಜನಿಕ ವಲಯದ ಮುಂದೆ ಹಾಜರುಪಡಿಸದೆ ಅಥವಾ ನ್ಯಾಯಾಲಯದಲ್ಲಿ ದಾವೆ ಹೂಡದೆ ತನ್ನ ಪೆನ್‌ಡ್ರೈವ್‌ಗಳಲ್ಲಿ ಮುಚ್ಚಿಟ್ಟುಕೊಳ್ಳುವುದು ಭ್ರಷ್ಟಾಚಾರವನ್ನು ಪೋಷಿಸಿದಂತಾಗುತ್ತದೆಯೇ ವಿನಾ ಅದರ ವಿರುದ್ಧ ಹೋರಾಟ ಮಾಡಿದಂತೆ ಹೇಗಾಗುತ್ತದೆ? ಎರಡನೆಯದಾಗಿ, ‘ಅಗತ್ಯ ಬಂದಾಗ ಹೊರಗೆಡವುತ್ತೇನೆ’ ಎಂದು ಹೇಳಿದ್ದಾರೆ. ಏನಿದು ‘ಅಗತ್ಯ ಎಂದರೆ? ತನ್ನ ರಾಜಕೀಯ ಲಾಭಕ್ಕಾಗಿ ಭ್ರಷ್ಟಾಚಾರವನ್ನು ಬಳಸಿಕೊಳ್ಳುವುದು ಎಂದರ್ಥವಲ್ಲವೇ! ಇದನ್ನೇ ಅಲ್ಲವೇ ನಾವು ‘ಅವಕಾಶವಾದಿ ರಾಜಕಾರಣ’ ಅರ್ಥಾತ್ ‘ಬ್ಲ್ಯಾಕ್‌ಮೇಲ್ ರಾಜಕಾರಣ’ ಎಂದು ಕರೆಯುವುದು! ಸರ್ಕಾರವೊಂದರ ಭ್ರಷ್ಟಾಚಾರ ಗೊತ್ತಿದ್ದೂ ಅದನ್ನು ಅವರು ಮುಚ್ಚಿಟ್ಟುಕೊಳ್ಳುತ್ತಾರೆ ಎಂದರೆ ಅವರಿಗೆ ನಾಡಿನ ಜನರ ಕಾಳಜಿಗಿಂತ ಹೆಚ್ಚಾಗಿ ತಮ್ಮ ರಾಜಕೀಯ ಸ್ವಾರ್ಥವೇ ಮುಖ್ಯವಾಯಿತು ಎಂದಾಯಿತಲ್ಲವೇ!!!

ಈ ಪ್ರಶ್ನೆಗಳನ್ನೆಲ್ಲ ಕುಮಾರಸ್ವಾಮಿಯವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆಂಬುದು ಅವರಿಗೇ ಬಿಟ್ಟ ಸಂಗತಿ. ಈಗ, ಭ್ರಷ್ಟಾಚಾರದ ಕುರಿತು ಇಷ್ಟೆಲ್ಲ ಆರೋಪಗೈಯ್ಯುತ್ತಿರುವ ಇದೇ ಕುಮಾರಸ್ವಾಮಿಯವರು ಹಿಂದೆ ಭ್ರಷ್ಟಾಚಾರವನ್ನು ಹೇಗೆಲ್ಲ ವ್ಯಾಖ್ಯಾನಿಸಿಕೊಂಡಿದ್ದರು ಎಂಬುದಕ್ಕೆ ಕೆಲವೊಂದು ನಿದರ್ಶನಗಳನ್ನು ನೋಡೋಣ.

2011ರಲ್ಲಿ ನಡೆದ ಘಟನೆ. ಜನಲೋಕಪಾಲ್ ಮಸೂದೆಯ ಕುರಿತು ಆಗಿನ ಯುಪಿಎ ಸರ್ಕಾರ ಚರ್ಚೆ ನಡೆಸಿತ್ತು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ‘ಜನಲೋಕಪಾಲ್ ಮಸೂದೆಯನ್ನು ರೂಪಿಸುವ ಮೊದಲು ಎಲ್ಲಾ ರಾಜ್ಯಗಳ ಸಿಎಂಗಳ ಸಲಹೆ ಪಡೆಯಬೇಕು’ ಎಂಬ ಹೇಳಿಕೆ ಕೊಟ್ಟಿದ್ದರು. ಅದೇ ಸಂದರ್ಭದಲ್ಲಿ ಕಾರ್ಯನಿಮಿತ್ತ ಹುಬ್ಬಳ್ಳಿಗೆ ಹೋಗಿದ್ದ ಕುಮಾರಸ್ವಾಮಿಯವರನ್ನು ಈ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಪತ್ರಕರ್ತರು ಕೇಳಿದಾಗ, “ಇಂದಿನ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿಯವರು ಇದ್ದಿದ್ದರೆ ಅವರು ಕೂಡಾ ಭ್ರಷ್ಟರಾಗುತ್ತಿದ್ದರು. ರಾಜಕೀಯದಲ್ಲಿ ಉಳಿಯಬೇಕಾದರೆ ಭ್ರಷ್ಟರಾಗದೆ ಉಳಿಯಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು. ಮಹಾತ್ಮ ಗಾಂಧಿಯವರನ್ನು ಕೂಡಾ ಈ ಕಾಲದ ಭ್ರಷ್ಟಚಾರದ ಸಹಸಂಗಡಿಗರನ್ನಾಗಿ ವ್ಯಾಖ್ಯಾನಿಸುವ ಮೂಲಕ ಕುಮಾರಸ್ವಾಮಿಯವರು ಭ್ರಷ್ಟಚಾರವನ್ನು ಸಮರ್ಥಿಸಿಕೊಂಡಿದ್ದರು. ಯಥಾ ಪ್ರಕಾರ ಈ ಹೇಳಿಕೆ ವಿವಾದವಾದ ನಂತರ, ತಾನು ಹಾಗೆ ಹೇಳಿಲ್ಲ, ಆದರೆ ಮಾಧ್ಯಮದವರು ಹೇಳಿಕೆಯನ್ನು ತಿರುಚಿದ್ದಾರೆ ಎಂದು ಬಚಾವಾಗುವ ಪ್ರಯತ್ನ ಮಾಡಿದ್ದರು.

ಇವತ್ತು ಪೆನ್‌ಡ್ರೈವ್ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಇದೇ ಕುಮಾರಸ್ವಾಮಿಯವರನ್ನು 2014ರಲ್ಲಿ ಆಡಿಯೋ ಸಿಡಿಯೊಂದು ಭ್ರಷ್ಟಚಾರದ ಚರ್ಚೆಯಲ್ಲಿ ಸಿಲುಕಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಎಂಎಲ್‌ಸಿ ಚುನಾವಣೆಯ ಸಂದರ್ಭ. ವಿಜಯಪುರದ ಜೆಡಿಎಸ್ ನಾಯಕ ವಿಜುಗೌಡ ಪಾಟೀಲರು ಎಂಎಲ್‌ಸಿ ಟಿಕೇಟಿಗಾಗಿ ಕುಮಾರಸ್ವಾಮಿಯವರನ್ನು ಸಂಪರ್ಕಿಸಿದ್ದರು. ಆಗ ಕುಮಾರಸ್ವಾಮಿಯವರು, ವಿಜುಗೌಡ ಬೆಂಬಲಿಗರಿಗೆ ಹೇಳಿದರನ್ನೆದ ಮಾತುಕತೆಯ ಸಿಡಿಯೊಂದು ತಲ್ಲಣ ಸೃಷ್ಟಿಸಿತ್ತು. ಅದರಲ್ಲಿ ಕುಮಾರಸ್ವಾಮಿಯವರದು ಎನ್ನಲಾದ ಧ್ವನಿ “ನಮ್ಮ ಪ್ರತಿ ಎಂಎಲ್‌ಎನೂ ಒಂದೊಂದು ಕೋಟಿ ದುಡ್ಡು ಕೇಳುತ್ತಿದ್ದಾರೆ. ಆಮೇಲೆ ನೀವು ಯಾರನ್ನು ಬೇಕಾದ್ರೂ ಎಂಎಲ್‌ಸಿ ಮಾಡ್ಕೊಳಿ ಎನ್ನುತ್ತಿದ್ದಾರೆ….. ನಲವತ್ತು ಜನರಿಂದ (ಜೆಡಿಎಸ್ ಎಂಎಲ್‌ಎಗಳು) ನಲವತ್ತು ಕೋಟಿ ಕೇಳ್ತಾ ಇದಾರೆ. ಇದು ನನ್ನ ಪರಿಸ್ಥಿತಿ” ಎಂದು ಸ್ಪಷ್ಟವಾಗಿ ಹೇಳಿತ್ತು. ಅಂದರೆ, ಜನರ ಆಶೋತ್ತರಗಳಿಗೆ ಸದನದೊಳಗೆ ಧ್ವನಿಯಾಗಬೇಕಾದ ಎಂಎಲ್‌ಸಿ ಟಿಕೇಟನ್ನು ದುಡ್ಡಿಗೋಸ್ಕರ ಮಾರಾಟ ಮಾಡಿಕೊಳ್ಳುವ ಭ್ರಷ್ಟಾಚಾರಕ್ಕೆ ಕುಮಾರಸ್ವಾಮಿಯವರ ಧ್ವನಿ ಯಾವ ಮುಲಾಜೂ ಇಲ್ಲದೆ ಬೇಡಿಕೆ ಇಟ್ಟಿತ್ತು.

ವಿಪರ್ಯಾಸವೆಂದರೆ, ಕುಮಾರಸ್ವಾಮಿಯವರು ಆ ಧ್ವನಿ ತನ್ನದಲ್ಲ ಎಂದು ಯಾವ ಸಂದರ್ಭದಲ್ಲೂ ನಿರಾಕರಿಸಲಿಲ್ಲ. ಬದಲಿಗೆ, “ಎಲ್ಲಾ ಪಕ್ಷಗಳಲ್ಲೂ ಈ ವ್ಯವಹಾರ ನಡೆಯುತ್ತದೆ, ಅದನ್ನು ನಾನು ಬಾಯಿಬಿಟ್ಟು ಹೇಳಿದ್ದೇನಷ್ಟೆ” ಎಂದು ಸಮರ್ಥಿಸಿಕೊಂಡಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ’ಬೇರೆ ಪಕ್ಷಗಳಲ್ಲಿ ಏನು ನಡೆಯುತ್ತದೆ ಅನ್ನೋದರ ಮೂಲಕ, ತನ್ನ ಮೇಲಿನ ಈ ಭ್ರಷ್ಟಾಚಾರದ ಆರೋಪವನ್ನು ಕುಮಾರಸ್ವಾಮಿಯವರು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂಬ ಮಾತನ್ನು ಸದನದಲ್ಲಿ ಆಡಿದ್ದರೆ; ಆಗಿನ್ನೂ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ದಿವಂಗತ ಅನಂತ್‌ಕುಮಾರ್ ಅವರು “ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಮಾಜಿ ಮುಖ್ಯಮಂತ್ರಿಯೊಬ್ಬರು ಈ ಬಗೆಯ ಭ್ರಷ್ಟಚಾರವನ್ನು ಈ ರೀತಿ ಸಮರ್ಥಿಸಿಕೊಳ್ಳಲು ಮುಂದಾಗಿರುವುದು ದುರಾದೃಷ್ಟಕರ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಇನ್ನು ತೀರಾ ಇತ್ತೀಚೆಗೆ, 2018ರ ಜೂನ್ 11ರಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಗಾಂಧಿಭವನದಲ್ಲಿ ಮಾತನಾಡುತ್ತಾ ಮಾಧ್ಯಮದವರ ಎದುರು, “ಏಕಾಏಕಿ ಭ್ರಷ್ಟಾಚಾರ ನಿಲ್ಲಿಸಲು ಮುಂದಾದರೆ ನನ್ನ ಸ್ಥಾನವೇ ಉಳಿಯದು” ಎಂಬ ಮಾತನ್ನು ಹೇಳಿದ್ದರು. ಮುಂದುವರೆದು “ಇತ್ತೀಚೆಗೆ ತಾನು ಶೃಂಗೇರಿ ಮಠದ ಶ್ರೀಗಳನ್ನು ಭೇಟಿ ಮಾಡಿದ್ದ ವೇಳೆ ಅವರು ಭ್ರಷ್ಟಾಚಾರ ನಿಲ್ಲಿಸಿ ಎಂದು ಹೇಳಿದ್ದರು. ಅದಕ್ಕೆ ನಾನು ಸಂಪೂರ್ಣವಾಗಿ ನಿಲ್ಲಿಸೋದು ಕಷ್ಟವೆಂದು ಹೇಳಿದ್ದೆ. ಸಿಬ್ಬಂದಿ-ಅಧಿಕಾರಿಗಳ ವರ್ಗಾವಣೆಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲೇ ಭ್ರಷ್ಟಾಚಾರ ನಡೆಯುತ್ತದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೆಲವು ಮಧ್ಯವರ್ತಿಗಳಿದ್ದಾರೆ. ವರ್ಗಾವಣೆ ಮಾಡಿಸಲು ಓಡಾಡುತ್ತಿರುತ್ತಾರೆ” ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ಆ ಮೂಲಕ ಮತ್ತೊಮ್ಮೆ ಭ್ರಷ್ಟಾಚಾರವನ್ನು ಅವರು ಸಮರ್ಥಿಸಿಕೊಂಡಿದ್ದರು.

ಮೇಲಿನ ಮೂರೂ ನಿದರ್ಶನಗಳಲ್ಲಿ, ಇವತ್ತಿನ ವ್ಯವಸ್ಥೆಯ ಭ್ರಷ್ಟಾಚಾರದ ಹುಳುಕನ್ನು ಯಾವ ಮುಲಾಜೂ ಇಲ್ಲದೆ ಹೊರಗೆಡವಿದ ಕುಮಾರಸ್ವಾಮಿಯವರ ದಿಟ್ಟತನ ಕೆಲವರಿಗೆ ಕಾಣಿಸಬಹುದಾದರೂ, ಅಂತಹ ವ್ಯವಸ್ಥೆಯನ್ನು ಬದಲಾಯಿಸುವ ಅಪೇಕ್ಷೆಗಿಂತ ಅದನ್ನು ಒಪ್ಪಿ ಸ್ವೀಕರಿಸುವ ಹಾಗೂ ಸಹಜೀಕರಿಸುವ ಉಮೇದೇ ಅವರ ಮಾತುಗಳಲ್ಲಿ ಧ್ವನಿಸುತ್ತಿರುವುದನ್ನು ನಾವು ಅಲ್ಲಗಳೆಯಲಾಗುವುದಿಲ್ಲ.

ಭ್ರಷ್ಟಾಚಾರದ ಕುರಿತು ತಮ್ಮೊಳಗೆ ಈ ರೀತಿಯ ಗೊಂದಲಮಯ ವ್ಯಾಖ್ಯಾನೆಗಳನ್ನು ಹೊಂದಿರುವ ಕುಮಾರಸ್ವಾಮಿಯವರು ಇವತ್ತು ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದನ್ನು ರಾಜಕೀಯ ವಿಶ್ಲೇಷಕರು ಹತಾಶೆಯ ಮಾನದಂಡದಲ್ಲಿ ಅಳೆಯುತ್ತಿರುವುದು ಸಮರ್ಪಕವಾಗಿಯೇ ಇದೆ. ಯಾಕೆಂದರೆ ಸ್ವತಃ ತಾನು ಮುಖ್ಯಮಂತ್ರಿಯಾಗಿದ್ದಾಗಲು ವರ್ಗಾವಣೆ ದಂಧೆ ನಿರಾತಂಕವಾಗಿ ನಡೆಯುತ್ತಿದ್ದುದನ್ನೂ, ಅದನ್ನು ವಿಧಾನಸೌಧದ ಮೂರನೇ ಮಹಡಿಯ ಮಧ್ಯವರ್ತಿಗಳು ನಡೆಸುತ್ತಿರುವುದನ್ನೂ ಅಸಹಾಯಕರಾಗಿ ಒಪ್ಪಿಕೊಂಡಿದ್ದ ಕುಮಾರಸ್ವಾಮಿಯವರು, ಈಗ ಅದೇ ವರ್ಗಾವಣೆಯ ದಂಧೆಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಮಗ ನಡೆಸುತ್ತಿದ್ದಾರೆ ಎಂದು ಆರೋಪಿಸಿದರೆ ಹತಾಶೆ ಎನ್ನದೆ ಬೇರ‍್ಯಾವ ರೀತಿಯಲ್ಲಿ ಸ್ವೀಕರಿಸಲು ಸಾಧ್ಯ? ಆದಾಗ್ಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಹೊಣೆಗಾರಿಕೆಯನ್ನು ನಾವು ತಳ್ಳಿಹಾಕಲು ಬರುವುದಿಲ್ಲ. ಸರ್ಕಾರವನ್ನು ಸದಾ ಎಚ್ಚರಿಕೆಯಲ್ಲಿಡುವಂತಹ ಪ್ರಯತ್ನಗಳನ್ನು ವಿರೋಧ ಪಕ್ಷಗಳು ಖಂಡಿತ ಮಾಡಬೇಕು, ಆದರೆ ಅದು ಬೆದರಿಕೆಯೊಡ್ಡುವಂತಹ ಪ್ರಯತ್ನಗಳಾಗಿರಬಾರದು ಎಂಬುದನ್ನು ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್, ಮೂರೂ ಪಕ್ಷಗಳು ತಿಳಿದಿರಬೇಕಾದ್ದು ಉತ್ತಮ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!