ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯ ಪ್ರಭಾರ ಕಾರ್ಯದರ್ಶಿ ಕೆ.ಸಿ.ಸಾಕಮ್ಮ ವರ್ತಕರೊಬ್ಬರಿಂದ ಲಂಚ ಸ್ವೀಕರಿಸಿರುವ ಆರೋಪದ ಮೇಲೆ ಮಂಗಳವಾರ ಮಧ್ಯಾಹ್ನ ಮಳವಳ್ಳಿ ತಾಲ್ಲೂಕಿನ ಕಿರುಗಾವಲಿನಲ್ಲಿ ಬಂಧಿತರಾಗಿದ್ದಾರೆ.
ಕಿರುಗಾವಲು ಎಪಿಎಂಸಿ ಪ್ರಾಂಗಣದಲ್ಲಿನ ಗೋದಾಮು ಬಾಡಿಗೆ ವಿಚಾರವಾಗಿ ಆನಂದ್ ಎಂಬುವರಿಂದ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಡ್ಯ ಲೋಕಾಯುಕ್ತಕ್ಕೆ ವರ್ತಕ ಆನಂದ್ ದೂರು ಸಲ್ಲಿಸಿದ್ದರು. ಮಂಗಳವಾರ 20 ಸಾವಿರ ರೂ. ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಎಪಿಎಂಸಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದರಾಜು ಎಂಬುವರ ಮೂಲಕ ಹಣ ಪಡೆದು ತಮ್ಮ ಕಪಾಟಿನಲ್ಲಿರಿಸಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಹಣವನ್ನು ವಶಪಡಿಸಿಕೊಂಡು, ಸಾಕಮ್ಮ ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ದಾಳಿಯಲ್ಲಿ ಎಸ್ಪಿ ಪುಟ್ಟಮಾದಯ್ಯ, ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್, ವೃತ್ತ ನಿರೀಕ್ಷಕರಾದ ಮೋಹನ್ ರೆಡ್ಡಿ, ಪ್ರಕಾಶ್, ಬ್ಯಾಟರಾಯಿಗೌಡ, ಸಿಬ್ಬಂದಿಗಳಾದ ಶರತ್, ಶಂಕರ್, ಮಹದೇವಸ್ವಾಮಿ, ಹೇಮಾವತಿ, ನಂದಿನಿ ಭಾಗವಹಿಸಿದ್ದರು.