ಸಕಲ ಜೀವರಾಶಿಗಳಲ್ಲಿ ಹಸಿವು, ಮುಪ್ಪು, ರೋಗಗಳಿಗೆ ಯಾವುದೇ ಶಾಶ್ವತ ಪರಿಹಾರವಿಲ್ಲ, ಇವುಗಳಳನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಭಗವಾನ್ ಬುದ್ಧ ನೀಡಿರುವ ಸಂದೇಶ, ಸಾರ್ವಕಾಲಿಕ ಎಂದು ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಬೌದ್ಧಧಮ್ಮ ಪ್ರವಚಕ ಭಂತೇ ಬೋಧಿದತ್ತ ಹೇಳಿದರು.
ಮಂಡ್ಯನಗರದ ಕರ್ನಾಟಕ ಸಂಘದ ಹೆಚ್.ಹೊನ್ನಪ್ಪ ಸಭಾಂಗಣದಲ್ಲಿ ರಾಜ್ಯ ಪದವಿಪೂರ್ವ ಕಾಲೇಜುಗಳ ಪ.ಜಾತಿ, ಪ.ವರ್ಗ ದ ಅಧಿಕಾರಿಗಳು, ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಬೊಧಕೇತರ ನೌಕರರ ಸಂಘದ ಜಿಲ್ಲಾ ಶಾಖೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಾನ್ ಬುದ್ಧ ತಿಳಿಸಿರುವ ಹಾಗೆ, ಜಗತ್ತಿನಲ್ಲಿ ಸಕಲ ಜೀವರಾಶಿಗಳಿಗೆ ಹಸಿವು, ಮುಪ್ಪು, ರೋಗ, ಸಾವು ಈ 4 ಸಮಸ್ಯೆಗಳಿಗೆ ಪರಿಹಾರ ಲಭಿಸದು, ವೈಜ್ಞಾನಿಕ ಮನೋಭಾವ, ಆಧುನಿಕ ಜಗತ್ತಿನಲ್ಲಿ ಕೌಶಲ ಜ್ಞಾನ ಹೆಚ್ಚಿಸಿಕೊಳ್ಳದಿದ್ದರೆ, ನೀವು ಮೌಢ್ಯತೆಯಲ್ಲಿದ್ದೀರಿ, ಅಸ್ಪೃಶ್ಯರಂತೆ ಬದುಕುತ್ತಿದ್ಧಿರಿ ಎಂದು ಜಗತ್ತು ಹೀಯಾಳಿಸುತ್ತದೆ, ಗೌರವಯುತವಾಗಿ ಬದುಕಲು ಸಾಧ್ಯವಾಗುವುದಿಲ್ಲ, ಸಮಾಜವನ್ನು ತಿದ್ದುವಂತಹ ಮತ್ತು ಜಗತ್ತಿನಲ್ಲೇ ಅತ್ಯಂತ ಶೇಷ್ಠವಾದ ಮಹತ್ತರವಾದ ಕೆಲಸವೆಂದರೆ ಬೋಧನೆ ಮಾಡುವುದು, ಶಿಕ್ಷಣ, ಕೌಶಲ್ಯಜ್ಞಾನ ನೀಡುವುದು ಎಂದು ನುಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ನಳಂದ ಬೌದ್ಧ ವಿಶ್ವವಿದ್ಯಾನಿಲಯಕ್ಕೆ ರಾಜ್ಯ ಸರ್ಕಾರ 25 ಎಕರೆ ಭೂಮಿ ನೀಡಿದೆ, ಕಡಿಮೆ ಬೆಲೆಗೆ ಖರೀದಿ ಮಾಡಿದ್ದೇವೆ, ಇನ್ನೂ 400 ಎಕರೆ ಜಮೀನಿದೆ, ಸಂಘ ಸಂಸ್ಥೆಗಳು ಪಡೆದುಕೊಂಡು, ಪ್ರಬುದ್ಧ ಸಮಾಜವನ್ನು ಕಟ್ಟಿ, ಒಗ್ಗಟ್ಟಿನ ಸಂದೇಶ ಸಾರಬಹುದು. ಭಗವಾನ್ಬುದ್ಧ ಬೋಧಿಸಿದ 74 ಸಾವಿರ ಉಪದೇಶಗಳಿವೆ, ಎಲ್ಲವನ್ನು ಓದಲಿಕ್ಕೆ ಜನ್ಮವೇ ಸಾಲದು, ಅವು ಮನಸ್ಸು ಮತ್ತು ಧ್ಯಾನ ಕುರಿತಾಗಿವೆ, 1ರಿಂದ 11ರ ವರಗೆ ವಿಭಾಗಮಾಡಿ ಗ್ರಂಥದಲ್ಲಿ ಶೇಖರಣೆ ಮಾಡಲಾಗಿದೆ ಎಂದರು.
ಸಹಾಯಕ ಪ್ರಾಧ್ಯಾಪಕ ಮೈಸೂರಿನ ಜಿ.ನಾರಾಯಣಸ್ವಾಮಿ ಮಾತನಾಡಿ, ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳು ಮಾನಸಿಕ ಸ್ಥೈರ್ಯ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆಗಳು, ಜಟಿಲ ವಿಷಯಾಧಾರಿತ ಸಮಸ್ಯೆಗಳನ್ನು ಎದುರಿಸಬೇಕು, ಕೌಶಲ್ಯ ಜ್ಞಾನವಿಲ್ಲದವರನ್ನು ಉದ್ಯೋಗ ನೀಡುವ ಕಂಪನಿಗಳು ಕೈಬಿಡುತ್ತವೆ ಎಂದು ಸಲಹೆ ನೀಡಿದರು.
ನಿಮಗೆ ಇಷ್ಠವಾದ ವಿಷಯಗಳನ್ನು ಓದುವುದು ಮತ್ತು ಉದ್ಯೋಗ ಪಡೆಯುವುದು ಅವಶ್ಯ, ಬೇರೆಯರವರ ಅನುಸರಿಸಿ, ಇಷ್ಟವಿಲ್ಲದೆ ಇದ್ದರೂ ಓದಿದರೆ ಫೇಲ್ ಆಗುವುದು ಖಚಿತ, ಕೌಶಲ್ಯತೆ ಕುಂಟಿತವಾಗುತ್ತದೆ, ಸಾಧನೆ ಮಾಡುವ ಹಂಬಲ ಕಡಿಮೆಯಾಗುತ್ತದೆ, ಅವರಿವರನ್ನು ದೂಷಿಸಿಕೊಂಡು ಬಾಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ, ಉಪನ್ಯಾಸಕ ಡಾ.ಎಸ್.ಮಂಗಳಮೂರ್ತಿ, ಸಂಘದ ಅಧ್ಯಕ್ಷ ಕೆ.ಶಿವಲಿಂಗಯ್ಯ, ಕಾರ್ಯದರ್ಶಿ ಚಂದ್ರಲಿಂಗು, ಕಾರ್ಯಾಧ್ಯಕ್ಷ ಸುರೇಶ್, ಖಜಾಂಚಿ ಪ್ರಕಾಶ್, ಸಂ.ಕಾರ್ಯದರ್ಶಿ ನಾಗರಾಜು, ಪದಾಧಿಕಾರಿಗಳಾದ ವಿಶ್ವನಾಥ್, ಕೃಷ್ಣಪ್ಪ, ಎಂ.ಸುರೇಶ್, ಸಿ.ಸುರೇಶ್, ವೆಂಟಕೇಶ್, ಲಿಂಗರಾಜು, ಸಿದ್ದರಾಜು ಮತ್ತಿತರರಿದ್ದರು.