ಮಂಡ್ಯ ವಿಶ್ವವಿದ್ಯಾವಿದ್ಯಾಲಯಕ್ಕೆ 5 ಕೋಟಿ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಕೂಡಲೆ ಒದಗಿಸುವ ಭರವಸೆಯನ್ನು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರು ಭರವಸೆ ನೀಡಿದ್ದಾರೆಂದು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಇತ್ತೀಚೆಗೆ ತಾವು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಈ ಭರವಸೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಶಾಸಕ ದಿನೇಶ್ ಗೂಳಿಗೌಡ ಅವರು ಮಂಡ್ಯ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡ ಬಳಿಕ ಈಚೆಗೆ ವಿವಿಗೆ ಮೊದಲ ಬಾರಿ ಭೇಟಿ ನೀಡಿ, ವಾಸ್ತವ ಅಂಶಗಳ ಬಗ್ಗೆ ಅವಲೋಕನ ನಡೆಸಿದ್ದರು.
ಈ ವೇಳೆ ಪ್ರಾಧ್ಯಾಪಕ ಸಮಸ್ಯೆ, ಮೈಸೂರು ವಿವಿಯಿಂದ ಕಾಲೇಜುಗಳು ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರ್ಪಡೆ ಆಗದಿರುವುದು, ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕಾತಿ ಸಮಸ್ಯೆ, ಸಮರ್ಪಕ ಗ್ರಂಥಾಲಯ ಇಲ್ಲದಿರುವುದು, ಕ್ರೀಡಾ ಸೌಕರ್ಯ, ಹಾಸ್ಟೆಲ್ ಸೌಲಭ್ಯ, ತೂಬಿನಕೆರೆ ಉಪ ಕೇಂದ್ರವನ್ನು ಮಂಡ್ಯ ವಿವಿಗೆ ಸೇರ್ಪಡೆಗೊಳಿಸುವುದು, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗೆ ಅಗತ್ಯ ಪಿಠೋಪಕರಣಗಳ ತುರ್ತು ಅಗತ್ಯದ ಬಗ್ಗೆ ಶಾಸಕರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಸಚಿವರು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು.