Tuesday, May 14, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಈಗಲೂ ಹೂಡಿಕೆಗೆ ನೆಚ್ಚಿನ ತಾಣ| ನಿರ್ಮಲ ಸೀತಾರಾಮನ್ ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾವೇಶವೊಂದರಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿಯೇ ಕರ್ನಾಟಕವು ವಿದೇಶಿ ಹೂಡಿಕೆಯನ್ನು (ಎಫ್‌ಡಿಐ) ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರ ಸರ್ಕಾರದ ಡೇಟಾ ಮೂಲಕವೇ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ (ಟ್ವೀಟ್) ಮಾಡಿರುವ ಸಿಎಂ, “ಇತ್ತೀಚೆಗಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಸಮಾವೇಶದಲ್ಲಿ ಕರ್ನಾಟಕದ ಬಗ್ಗೆ ಆಧಾರರಹಿತ ಹೇಳಿಕೆ ನೀಡಿದ್ದಾರೆ. ಒಂದು ವರ್ಷದ ಹಿಂದೆ ಕರ್ನಾಟಕವು ಹೂಡಿಕೆಗೆ ನೆಚ್ಚಿನ ತಾಣವಾಗಿತ್ತು, ಆದರೆ ಈಗ ಗ್ಯಾರಂಟಿ ಯೋಜನೆಯಿಂದಾಗಿ ಆ ಸ್ಥಾನ ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದರು. ನಿರ್ಮಲಾ ಸೀತಾರಾಮನ್ ಅವರೇ, ಕರ್ನಾಟಕವು ಈಗಲೂ ಎಫ್‌ಡಿಐಗೆ ನೆಚ್ಚಿನ ತಾಣವಾಗಿದೆ” ಎಂದು ಹೇಳಿದ್ದಾರೆ.

“>

“ಭಾರತ ಸರ್ಕಾರದ ವೆಬ್‌ಸೈಟ್ investindia.gov.in ಪ್ರಕಾರ ನಾವು ಹೇಳುವುದಾದರೆ 2023-24 ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಎಫ್‌ಡಿಐ ಪಡೆದ ಟಾಪ್ 5 ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದು. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಶೇಕಡ 30, ಕರ್ನಾಟಕ ಶೇಕಡ 22, ಗುಜರಾತ್ ಶೇಕಡ 17, ದೆಹಲಿ ಶೇಕಡ 13 ಮತ್ತು ತಮಿಳುನಾಡು ಶೇಕಡ 5ರಷ್ಟು ಎಫ್‌ಡಿಐ ಸ್ವೀಕರಿಸಿದೆ” ಎಂದು ಸಿದ್ಧರಾಮಯ್ಯ ವಿವರಿಸಿದರು.

“ಇನ್ನೊಂದೆಡೆ ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಎಫ್‌ಡಿಐ ಬೆಳವಣಿಗೆಯ ಸ್ಥಿತಿಯನ್ನು ನೀವೇ ನೋಡಿ. ಭಾರತದಲ್ಲಿ ಎಫ್‌ಡಿಐ ಕಡಿಮೆಯಾಗುತ್ತಿದೆ. ಯುಪಿಎ ಸರ್ಕಾರ ಇದ್ದಾಗ ಹತ್ತು ವರ್ಷದಲ್ಲಿ ಶೇಕಡ 27 ರಷ್ಟು ಎಫ್‌ಡಿಐ ಬೆಳವಣಿಗೆಯಾಗಿದೆ. ಆದರೆ ನಿಮ್ಮ ಸರ್ಕಾರ ಅಧಿಕಾರ ನಡೆಸಿದ 10 ವರ್ಷಗಳಲ್ಲಿ ವರ್ಷಕ್ಕೆ ಶೇಕಡ 6.6ಕ್ಕೆ ಇಳಿದಿದೆ. ಇತರರಿಗೆ ಲೆಕ್ಚರ್ ನೀಡುವ ಮುನ್ನ ಸ್ವಲ್ಪ ನಿಮ್ಮ ಮನೆಯನ್ನು ನೋಡಿಕೊಳ್ಳಿ” ಎಂದು ಸಿದ್ಧರಾಮಯ್ಯ ಅವರು ಟಾಂಗ್ ನೀಡಿದ್ದಾರೆ.

“ಪ್ರತಿ ಕುಟುಂಬಕ್ಕೆ ವಾರ್ಷಿಕ 24,000 ರೂಪಾಯಿಗಳ ನಗದು ವರ್ಗಾವಣೆ ಮತ್ತು ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಮಹಿಳೆಯರ ಸಬಲೀಕರಣವನ್ನು ಮಾಡುವ ನಮ್ಮ ಸರ್ಕಾರದ ನಿರ್ಧಾರವನ್ನು ನೀವು ವಿರೋಧಿಸುತ್ತಿದ್ದರೆ, ಅದು ನಿಮ್ಮ ನೀತಿಯಾಗಿದೆ. ನಮ್ಮ ಜನರೊಂದಿಗೆ ನಿಲ್ಲುವುದು ಮತ್ತು ಜನರಿಗೆ ಆರ್ಥಿಕ ಸಹಾಯ ಮಾಡಿ ಸಬಲೀಕರಣಗೊಳಿಸುವುದು ನಮ್ಮ ನೀತಿಯಾಗಿದೆ. ಚುನಾವಣಾ ಬಾಂಡ್‌ಗಳ ಮೂಲಕ ನಿಮಗೆ ದೇಣಿಗೆ ನೀಡುವ ದೊಡ್ಡ ಉದ್ಯಮಿಗಳ ಪರವಾಗಿ ನೀವು ನಿಲ್ಲುತ್ತೀರಿ. ನಾವು ಜನರೊಂದಿಗೆ ನಿಲ್ಲುತ್ತೇವೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!