ಮಂಡ್ಯ ತಾಲ್ಲೂಕಿನಾದ್ಯಂತ ವಯೋವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಪ್ರತಿ ತಿಂಗಳು ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ವೇತನವನ್ನು ಎರಡು-ಮೂರು ತಿಂಗಳಿಗೊಮ್ಮೆ ನೀಡುತ್ತಿದ್ದು, ಇದರಿಂದಾಗಿ ಹಲವರು ತೊಂದರೆ ಅನುಭವಿಸುತ್ತಿದ್ದು, ಇನ್ನೂ ಮುಂದೆ ಸಕಾಲಕ್ಕೆ ವೇತನಗಳನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ವೀರ ಕನ್ನಡಿಗರ ಘರ್ಜನೆ) ಮಂಡ್ಯ ತಹಶೀಲ್ದಾರ್ ಕುಂಞ ಅಹಮದ್ ಅವರಿಗೆ ಮನವಿ ಸಲ್ಲಿಸಿತು.
ಕೆಲವರಿಗೆ ಒಂದು ಹಾಗೂ ಎರಡು ವರ್ಷಗಳಿಂದ ವೇತನಗಳು ಬರುತ್ತಿಲ್ಲ, ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರ ಗಮನಕ್ಕೆ ಹಲವಾರು ಭಾರಿ ಮೌಖಿಕವಾಗಿ ತಿಳಿಸಿದ್ದರೂ, ಸಹ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ, ತಾಲ್ಲೂಕು ಕಚೇರಿಗೆ ಸುತ್ತಮುತ್ತಲ ಗ್ರಾಮಗಳಿಂದ ಬರುವ ಸಾರ್ವಜನಿಕರಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಕಾಂಪೌಂಡ್ ಹಾಗೂ ಬೇಲಿಗಳ ಹತ್ತಿರ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದನ್ನು ತಪ್ಪಿಸಲು ಶೌಚಾಲಯದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನವೀನ್ ಎಂ.ಸಿ., ಸಿದ್ದರಾಜು ಹುಲಿವಾನ, ಚಂದ್ರು, ಮನು ಮೊಡಚಾಕನಹಳ್ಳಿ, ರಕ್ಷಿತ್ ಮುಂತಾದವರು ಉಪಸ್ಥಿತರಿದ್ದರು.