ಮಂಡ್ಯ ತಾಲೂಕಿನ ಕಾರಸವಾಡಿ ಗ್ರಾಮದಲ್ಲಿ ಶ್ರೀ ಭೈರವೇಶ್ವರ ಸ್ವಾಮಿಯ ಐದು ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರತಿ ಮನೆಗಳಿಂದ ಬಿಂದಿಗೆ ಹಾಗೂ ಪೂಜಾ ಸಾಮಗ್ರಿಗಳೊಡನೆ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಪಕ್ಕದಲ್ಲಿರುವ ಶ್ರೀ ಮಾದೇಶ್ವರ ದೇವಾಲಯದಿಂದ ಮೀಸಲು ನೀರನ್ನು ಹೊತ್ತು ಗ್ರಾಮದ ಶ್ರೀ ಭೈರವೇಶ್ವರ ದೇವಾಲಯಕ್ಕೆ ಆಗಮಿಸಿದರು.
15 ದಿನಗಳಿಂದ ಗ್ರಾಮದ ಮಾರಮ್ಮ ದೇವಿಯ ದೇವಾಲಯದ ಮುಂದೆ ಪ್ರತಿಷ್ಠಾಪಿಸಿರುವ ಕಂಬಕ್ಕೆ ಮಹಿಳೆಯರು ನೀರನ್ನು ಸುರಿದು ಭಕ್ತಿ ಮೆರೆದರು. ನಂತರ ಮಂಚಮ್ಮ ಮತ್ತು ಕ್ಯಾತಮ್ಮದೇವಿಯರ ಬಂಡಿಯನ್ನು ಶೃಂಗಾರ ಮಾಡಿ ಹಳ್ಳಿಕಾರ್ ತಳಿ ಎತ್ತುಗಳ ಮೂಲಕ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಪಟ್ಟಣದಮ್ಮ ದೇವಾಲಯ ಸುತ್ತ ಪ್ರದಕ್ಷಿಣೆ ಮಾಡಿ ಪೂಜೆ ಸಲ್ಲಿಸಿದರು.
ಗ್ರಾಮ ದೇವರ ಹಬ್ಬದಲ್ಲಿ ಗ್ರಾಮದ ಮುಖಂಡರಾದ ಸಿದ್ದರಾಮೇಗೌಡ, ಡಿ. ಪ್ರಕಾಶ್, ಕಾರಸವಾಡಿ ಮಹದೇವ್, ಅಣ್ಣಾಜಿ, ಕೆ.ಎಲ್ ಲಕ್ಷ್ಮಣ್, ಕೆ.ಎನ್ ಮಹೇಶ್, ಕೆ.ಎಸ್ ಬೋರೇಗೌಡ ಡಿ. ಉದಯ್ ಕುಮಾರ್,ರಾಮಕೃಷ್ಣ, ಕಿರಣ್ ಗೌಡ ನೇತೃತ್ವ ವಹಿಸಿದ್ದರು.