ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ವತಿಯಿಂದ ನಮ್ಮ ಮತ ನಮ್ಮ ಹಕ್ಕು, ಮತದಾನ ಮರೆಯದಿರಿ ಎಂದು ಜನರಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಬ್ ಅಧ್ಯಕ್ಷ ಬಸವೇಗೌಡ ಮಾತನಾಡಿ, ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶವಾಗಿರುವ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಹೊಸ ಸರ್ಕಾರ ರಚನೆಯ ವಸಂತ ಕಾಲ. ಪ್ರಜಾಪ್ರಭುತ್ವದಲ್ಲಿ ಸದೃಢ ಸರ್ಕಾರ ರಚನೆಗೆ ಚುನಾವಣೆಗಳೇ ವೇದಿಕೆ. ಅಭಿವೃದ್ಧಿ, ಸಮೃದ್ಧಿ, ನೆಮ್ಮದಿಯ ನಾಡು-ದೇಶ ನಿರ್ಮಾಣದಲ್ಲಿ ಸರ್ಕಾರಗಳ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.
ದೂರದೃಷ್ಠಿಯ, ಸಮಾಜಮುಖಿ ನಾಯಕ, ಉತ್ತಮ ಸರ್ಕಾರ ದೇಶದ ಭವಿಷ್ಯ ಎಂಬಂತೆ ಏ. 26ರಂದು ನಡೆಯಲಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಹಬ್ಬದಲ್ಲಿ ಉತ್ತಮರನ್ನು ಆಯ್ಕೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ. ಜನ ಸೇವೆಯ, ಕ್ಷೇತ್ರಾಭಿವೃದ್ಧಿಯ ವಾಗ್ದಾನ ನೀಡಿದ್ದಾರೆ. ಚುನಾವಣೆಗಾಗಿ ಅಧಿಕಾರಿಗಳು ಶ್ರಮವಹಿಸಿದ್ದಾರೆ. ಇವರ ಆಸೆಗೆ, ಶ್ರಮಕ್ಕೆ ಬೆಲೆ ನೀಡಿ ಪ್ರಜಾಪ್ರಭುತ್ವವಕ್ಕೆ ಗೌರವ ನೀಡುವ ಮೂಲಕ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ತಿಳಿಸಿದರು.
ಯಾರಿಗೆ ಮತ ಹಾಕಬೇಕೆಂಬುದು ಅವರವರ ಇಚ್ಚೆ. ಆದರೆ ಮತದಾನ ಮಾಡಲೇಬೇಕೆಂಬುದು ನಮ್ಮ ಆಶಯ. ಸಂವಿಧಾನ ಬದ್ಧ ಕರ್ತವ್ಯವೂ ಹೌದು. ಜಾತಿ, ಮತ, ಧರ್ಮ, ಹಣ ಇನ್ನಿತರೆ ಆಮಿಷಕ್ಕೆ ಬಲಿಯಾಗಿ ಮತಹಾಕದಿರಿ. ನಿಮ್ಮ ಹಕ್ಕು ಚಲಾಯಿಸಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು.
ಕ್ಲಬ್ನ ಪದಾಧಿಕಾರಿಗಳಾದ ಕೌಡ್ಲೆ ಚನ್ನಪ್ಪ, ಕೃಷ್ಣೇಗೌಡ, ಅನುಪಮಾ ಇತರರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.