ಮದ್ದೂರು ತಾಲ್ಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ಬೆಳಿಗ್ಗೆಗೆ ಸಂಭವಿಸಿದೆ.
ವೈದ್ಯನಾಥಪುರ ಗ್ರಾಮದ ರತ್ನಮ್ಮ ಲೇಟ್ ಸಿದ್ದಪ್ಪ ಅವರಿಗೆ ಸೇರಿದ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಡ ಹಂಚಿನ ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಹತ್ತು ಲಕ್ಷ ರೂ.ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಬೆಂದು ಕರಕಲಾಗಿವೆ.
ರತ್ನಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಒಂದೇ ಮನೆಯಲ್ಲಿ ಬೇರೆ ಬೇರೆ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಫ್ರಿಡ್ಜ್ ಹತ್ತಿಕೊಂಡು ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯ ಶೇ.70 ಭಾಗದಷ್ಟು ನಾಶವಾಗಿದೆ. ಎರಡು ಟಿವಿಗಳು, ಎರಡು ಫ್ರೀಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು, ದವಸ, ಧಾನ್ಯ, ಪೀಠೋಪಕರಣಗಳು , ವಸ್ತ್ರಗಳು, ಪಾತ್ರೆ ಪಗಡೆಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಸುಮಾರು 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.
ಬೆಂಕಿ ಹೊಗೆ ಕಾಣಿಸಿದ ಕೂಡಲೇ ಗ್ರಾಮಸ್ಥರೆಲ್ಲ ಸೇರಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ವಿಫಲವಾಗಿದೆ. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ತರುವಾಯ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಬಿಸಿಲು ಕೂಡ ಹೆಚ್ಚಿದ್ದರಿಂದ ಬೆಂಕಿ ಬೇಗನೇ ಎಲ್ಲೆಡೆ ವ್ಯಾಪಿಸಿದ ಪರಿಣಾಮ ಎಲ್ಲಾ ವಸ್ತುಗಳು ಬಹುತೇಕ ಸುಟ್ಟು ಕರಕಲಾಗಿದೆ.
ರತ್ನಮ್ಮ ಅವರ ಪುತ್ರ ಶ್ಯಾಮ್ ಮದ್ದೂರು ಪೋಲೀಸ್ ಠಾಣೆಯಲ್ಲಿ ಅಗ್ನಿ ಅವಘಡ ಸಂಬಂಧ ದೂರು ದಾಖಲಿಸಿದ್ದಾರೆ. ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಶಿವಾನಂದಯ್ಯ, ಸಿಬ್ಬಂದಿಗಳಾದ ವೆಂಕಟೇಶ, ಅಭಿನಂದನ್, ಉತ್ತಮ್, ಮಾರುತಿ ಮತ್ತು ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.