ಜನತೆಯ ಇಷ್ಟಾರ್ಥ ಸಿದ್ಧಿಗಾಗಿ ದೇವಾಲಯ ಅಗತ್ಯವಿದ್ದು, ಎಲ್ಲರ ಸಹಕಾರದೊಂದಿಗೆ ನವೀಕರಣಗೊಂಡಿವೆ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಆಡಳಿತ ಮಂಡಳಿ ಆಯೋಜಿಸಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ದಾರ ಹಾಗೂ ಗ್ರಾಮದೇವತೆಗಳ ದೇವಾಲಯಗಳಿಗೆ ಕಳಸ ಪ್ರತಿಸ್ಥಾಪನಾ ಮಹೋತ್ಸವ ಮತ್ತು ಅನ್ನ ಸಂತರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಮಾರು ವರ್ಷಗಳಿಂದ ದುಸ್ಥಿತಿಯಲ್ಲಿದ್ದ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿ ಜನತೆಯ ಇಷ್ಠಾರ್ಥ ಸಿದ್ದಿಗಾಗಿ ಸಮರ್ಪಣೆ ಮಾಡಲಾಗಿದೆ, ಹಲವು ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಕೋಟ್ಯಾಂತರ ರೂ.ಗಳನ್ನು ಖರ್ಚುಮಾಡಲಾಗಿದೆ ಎಂದು ನುಡಿದರು.
ಗ್ರಾಮದಲ್ಲಿ 3 ದಿನಗಳ ಕಾಲ ಪೂಜಾ ಕೈಂಕರ್ಯಗಳು, ಹೋಮ ಹವನ ನಡೆದಿವೆ, ಆದಿಚುಂಚನಗರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಮತ್ತು ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಗೋಪುರಗಳಿಗೆ ಕಳಸ ಪ್ರತಿಸ್ಥಾಪನೆ ವಿಜೃಂಭಣೆಯಿಂದ ನಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕಿರುತೆರೆ ನಾಯಕನಟ ವಿಶಾಲ್ರಘು, ಶ್ರೀ ಕಾಲಭೈರವೇಶ್ವರ ಸ್ವಾಮಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎಚ್.ಬಿ.ರಾಜಣ್ಣ, ಟಿ.ನಾಗರಾಜು, ಪ್ರ.ಕಾರ್ಯದರ್ಶಿ ಎಚ್.ಪಿ.ಶಶಿಕುಮಾರ್, ಕಾರ್ಯದರ್ಶಿ ಅಶ್ವಥ್, ಖಜಾಂಚಿ ಕಿರುಣ್ಕುಮಾರ್, ಸದಸ್ಯರು, ಗ್ರಾಮದ ಯಜಮಾನರು, ಯುವಮುಖಂಡರು ಹಾಜರಿದ್ದರು.