ಪ್ರಾಮಾಣಿಕ, ಭ್ರಷ್ಟಾಚಾರರಹಿತ, ಜನಪರ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ ಸಮಿತಿ ಪಕ್ಷವನ್ನು ನಾಡಿದ ಜನತೆ ಬೆಂಬಲಿಸಬೇಕೆಂದು ಕೆ.ಆರ್.ಎಸ್ ಪಕ್ಷದ ಮಂಡ್ಯ ಜಿಲ್ಲಾಧ್ಯಕ್ಷ ರಮೇಶ್ ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಮುಖ್ಯವಾಗಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಅರುಣಕುಮಾರ ಹೆಬ್ಬಕವಾಡಿ, ಕೆ.ಆರ್.ಪೇಟೆಯಿಂದ ಕಿಶೋರ್ ಎ.ಸಿ.ಅಲೇನಹಳ್ಳಿ, ನಾಗಮಂಗಲದಿಂದ ಜಿ.ಎಂ.ರಮೇಶ್ ಗೌಡ, ಮಳವಳ್ಳಿಯಿಂದ ನಂದೀಶ್ ಕುಮಾರ್ ಭಾಗವಹಿಸುವರು ಎಂದರು.
ಉಪಾಧ್ಯಕ್ಷ ಅರುಣಕುಮಾರ್ ಹೆಬ್ಬಕವಾಡಿ ಮಾತನಾಡಿ, ಕೆ.ಆರ್.ಎಸ್ ಪಾರ್ಟಿ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ 3 ಲಕ್ಷಕ್ಕಿಂತಲೂ ಹೆಚ್ಚಿನ ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ ಮಾಡಲಾಗುವುದು. ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಲೋಕಾಯುಕ್ತ ಬಲಪಡಿಸಲಾಗುವುದು. ಸಂಪೂರ್ಣ ಮದ್ಯ ನಿಷೇಧಿಸಿ, ಶಿಕ್ಷಣದ ಪ್ರತಿ ಹಂತದಲ್ಲಿಯೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.
ಕರ್ನಾಟಕದ ಉದ್ಯೋಗಗಳಲ್ಲಿ, ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ. ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಕನಿಷ್ಠ ₹ 2000 ರೂಪಾಯಿ ಮಾಸಾಶನ, ನಿರುದ್ಯೋಗ ಭತ್ಯೆ, ಎಲಾ ತರಹದ ಮಾಸಾಶನಗಳನ್ನು ರೂ. 3000ಕ್ಕೆ ಏರಿಕೆ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಮಲ್ಲೇಶ್, ಜಗದೀಶ್, ರಾಮಕೃಷ್ಣ, ನಂದೀಶ್ ಕುಮಾರ್ ಉಪಸ್ಥಿತರಿದ್ದರು.